ಬೆಂಗಳೂರು: ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಐತಿಹಾಸಿಕ ಜಯದ ಸಂಭ್ರಮದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಅಭಿಮಾನಿಗಳು ಗಾಯಗೊಂಡಿದ್ದಾರೆ. ಈ ದುರ್ಘಟನೆಯ ಕುರಿತು ಭಾರತದ ಕ್ರಿಕೆಟ್ ದಿಗ್ಗಜರಾದ ಸಚಿ್ನ್ ತೆಂಡೂಲ್ಕರ್ ಮತ್ತು ವಿಶ್ವಕಪ್ ವಿಜೇತ ಆಲ್ರೌಂಡರ್ ಯುವರಾಜ್ ಸಿಂಗ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಸಾವಿರಾರು ಅಭಿಮಾನಿಗಳು ತಮ್ಮ ಪ್ರೀತಿಯ ಆಟಗಾರರನ್ನು ನೋಡಲು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜಮಾಯಿಸಿದ್ದ ಸಂದರ್ಭ, ಕ್ರೀಡಾಂಗಣದ ಸಾಮರ್ಥ್ಯ (35,000 ಆಸನಗಳು) ಮೀರಿ ಎರಡು ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರಿಂದ ಅವ್ಯವಸ್ಥೆ ಉಂಟಾಯಿತು. ಈ ಕಾರಣದಿಂದಾಗಿ ವಿಜಯೋತ್ಸವ ಕಾರ್ಯಕ್ರಮವನ್ನು ಕೇವಲ 20 ನಿಮಿಷಗಳಲ್ಲಿ ಮುಗಿಸಲಾಯಿತು. ಆರ್ಸಿಬಿ ತಂಡದ ಆಟಗಾರರು, ಕೋಚ್ ಆಂಡಿ ಫ್ಲವರ್ ಮತ್ತು ಮೆಂಟರ್ ದಿನೇಶ್ ಕಾರ್ತಿಕ್ ಸೇರಿದಂತೆ ಎಲ್ಲರೂ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸಚಿನ್ ತೆಂಡೂಲ್ಕರ್ ತಮ್ಮ ಎಕ್ಸ್ (ಹಳೆಯ ಟ್ವಿಟರ್) ಖಾತೆಯಲ್ಲಿ, “ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಘಟನೆ ಅತ್ಯಂತ ದುಃಖಕರ. ಆಪ್ತರನ್ನು ಕಳೆದುಕೊಂಡ ಕುಟುಂಬಗಳ ಪ್ರತಿಯೊಬ್ಬರಿಗೂ ನನ್ನ ಹೃದಯದ ನಮನಗಳು. ಎಲ್ಲರಿಗೂ ಶಾಂತಿ ಮತ್ತು ಶಕ್ತಿಯು ದೊರಕಲಿ,” ಎಂದು ಟ್ವೀಟ್ ಮಾಡಿದ್ದಾರೆ.
ಯುವರಾಜ್ ಸಿಂಗ್ ಅವರು, “ಸಂಭ್ರಮದ ಕ್ಷಣ ದುಃಖದ ಘಟನೆಯಾಗಿ ಮಾರ್ಪಟ್ಟಿದೆ. ಬೆಂಗಳೂರು ಘಟನೆಯಲ್ಲಿ ಬಾಧಿತರಾದ ಎಲ್ಲರಿಗೂ ನನ್ನ ಸಂತಾಪಗಳು. ಅವರ ಕುಟುಂಬಗಳಿಗೆ ಶಕ್ತಿ ಸಿಗಲಿ, ಮೃತರ ಆತ್ಮಗಳಿಗೆ ಶಾಂತಿ ಸಿಗಲಿ,” ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಭಾರತದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಕೂಡ ಈ ದುರ್ಘಟನೆಯನ್ನು ಸಂತಾಪದಿಂದ ಸ್ವೀಕರಿಸಿ, ಗಾಯಗೊಂಡವರಿಗೆ ಶೀಘ್ರ ಗುಣಮುಖತೆ ಕೋರಿದ್ದಾರೆ. “ಇದು ಕ್ರಿಕೆಟ್ಗೆ ದುಃಖದ ದಿನ. ಆರ್ಸಿಬಿ ವಿಜಯೋತ್ಸವದ ವೇಳೆ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಹೃದಯದ ಸಂತಾಪಗಳು. ಗಾಯಗೊಂಡವರು ಬೇಗ ಗುಣಮುಖರಾಗಲಿ,” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಆರ್ಸಿಬಿ ತಂಡವೂ ಅಧಿಕೃತ ಹೇಳಿಕೆಯಲ್ಲಿ, “ಬೆಂಗಳೂರು ನಗರದಲ್ಲಿ ತಂಡದ ಆಗಮನದ ನಿರೀಕ್ಷೆಯಲ್ಲಿ ಕಾದಿದ್ದ ಅಭಿಮಾನಿಗಳ ಸಾವಿನಿಂದ ನಾವು ದುಃಖಿತರಾಗಿದ್ದೇವೆ. ಎಲ್ಲರ ಸುರಕ್ಷತೆ ಮತ್ತು ಖುಷಿಯೇ ನಮಗೆ ಮುಖ್ಯ. ಘಟನೆ ತಿಳಿದ ತಕ್ಷಣವೇ ಕಾರ್ಯಕ್ರಮ ನಿಲ್ಲಿಸಿ, ಸ್ಥಳೀಯ ಆಡಳಿತದ ಮಾರ್ಗದರ್ಶನವನ್ನು ಅನುಸರಿಸಿದ್ದೇವೆ,” ಎಂದು ತಿಳಿಸಿದೆ.
“ಆರ್ಸಿಬಿ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಹೃದಯಪೂರ್ವಕ ಸಂತಾಪ ಸೂಚಿಸಿದೆ. ಗಾಯಗೊಂಡವರು ಶೀಘ್ರ ಚೇತರಿಕೆಯಾಗಲಿ ಎಂದು ಪ್ರಾರ್ಥಿಸುತ್ತೇವೆ,” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.