ಜೈಪುರ: ಹಣದಾಸೆ ಜನರನ್ನು ಎಷ್ಟು ಕೀಳುಮಟ್ಟಕ್ಕೆ ಒಯ್ಯುತ್ತದೆ ಎನ್ನುವುದಕ್ಕೆ ಸಾಕ್ಷಿಯೆಂಬಂತೆ, ಬೆಳ್ಳಿ ಆಭರಣದ ಆಸೆಗಾಗಿ ವ್ಯಕ್ತಿಯೊಬ್ಬ ತನ್ನ ತಾಯಿಯ ಅಂತ್ಯಸಂಸ್ಕಾರಕ್ಕೇ ಅಡ್ಡಿ ಮಾಡಿದ ಅಮಾನವೀಯ ಘಟನೆಯೊಂದು ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದ್ದು, ಆ ವ್ಯಕ್ತಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಜೈಪುರ ಗ್ರಾಮಾಂತರ ಪ್ರದೇಶದ ವಿರಾಟ್ ನಗರ ಎಂಬಲ್ಲಿ ಈ ಘಟನೆ ನಡೆದಿದೆ. ಮೇ 3ರಂದು 80 ವರ್ಷ ವಯಸ್ಸಿನ ಛೀತೇರ್ ರೇಗರ್ ಎಂಬ ಮಹಿಳೆ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಬಳಿಕ ಅವರ ಪುತ್ರರು ಮತ್ತು ಸಂಬಂಧಿಕರು ಅಂತಿಮ ವಿಧಿವಿಧಾನಗಳನ್ನೆಲ್ಲ ಮುಗಿಸಿ, ಮೃತದೇಹವನ್ನು ಮನೆ ಸಮೀಪದ ಸ್ಮಶಾನಕ್ಕೆ ಅಂತ್ಯಕ್ರಿಯೆಗೆಂದು ಒಯ್ದಿದ್ದರು. ಚಿತೆಗೆ ಇನ್ನೇನು ಅಗ್ನಿ ಸ್ಪರ್ಶ ಮಾಡಲು ಬಾಕಿಯಿದೆ ಎನ್ನುವಂತೆ ಆ ಮಹಿಳೆಯ ಮಕ್ಕಳ ನಡುವೆ ಜಗಳ ಆರಂಭವಾಯಿತು.
माँ की चिता पर चांदी के कड़ों के लिए लेटा कलियुगी बेटा। कहा- जब तक कड़ा नहीं दोगे तब तक दाह-संस्कार नहीं होने दूंगा।
— Shubham Shukla (@ShubhamShuklaMP) May 16, 2025
ओमप्रकाश रेगर अपनी माँ की मृत्यु के बाद भी किया जमकर हंगामा। चाँदी के कड़े के लिए नहीं जलने दे रहा लाश। मामला राजस्थान के कोटपूतली का।
लोगों की संवेदनाएं शून्य… pic.twitter.com/4lbN06xkZV
ವೃದ್ಧೆಯ ಮೃತದೇಹವನ್ನು ಚಿತೆಯ ಮೇಲೆ ಇಡುವ ಸಂದರ್ಭದಲ್ಲಿ, ಅವರ ಕೈಯ್ಯಲ್ಲಿದ್ದ ಬೆಳ್ಳಿಯ ಬಳೆಗಳು ಮತ್ತು ಇತರೆ ಆಭರಣಗಳನ್ನು ತೆಗೆದು ಕುಟುಂಬದ ಹಿರಿಯರು, ಮಹಿಳೆಯ(ಛೀತೇರ್ ರೇಗರ್) ಹಿರಿಯ ಪುತ್ರ ಗಿರ್ಧಾರಿ ಲಾಲ್ ಅವರ ಕೈಗಿತ್ತರು. ತಾಯಿಯನ್ನು ಕೊನೆಯ ದಿನಗಳಲ್ಲಿ ಗಿರ್ಧಾರಿ ಲಾಲ್ ಅವರೇ ನೋಡಿಕೊಂಡಿದ್ದರು. ಹಿರೀಕರು ಆಭರಣಗಳನ್ನು ಲಾಲ್ ಕೈಗೆ ಹಸ್ತಾಂತರಿಸುತ್ತಿದ್ದಂತೆಯೇ ಕಿರಿಯ ಪುತ್ರ ಓಂಪ್ರಕಾಶ್ ಸಿಟ್ಟು ನೆತ್ತಿಗೇರಿತು. ಆ ಬೆಳ್ಳಿಯ ಬಳೆಗಳನ್ನು ನನಗೆ ನೀಡಬೇಕೆಂದು ಪಟ್ಟು ಹಿಡಿದ ಆತ, ಬಳೆಗಳನ್ನು ಕೊಡುವವರೆಗೂ ಚಿತೆಗೆ ಅಗ್ನಿಸ್ಪರ್ಶ ಮಾಡಲು ಬಿಡುವುದಿಲ್ಲ ಎಂದು ಹೇಳಿ, ತಾಯಿಯ ಮೃತದೇಹವನ್ನು ಇಟ್ಟಿದ್ದ ಚಿತೆಯ ಮೇಲೆ ಹತ್ತಿ ಮಲಗಿಕೊಂಡಿದ್ದು ಕಂಡುಬಂತು.
ಇದನ್ನೂ ಓದಿ: #viral news
ಚಿತೆಯಿಂದ ಕೆಳಗಿಳಿಯುವಂತೆ ಸಂಬಂಧಿಕರು ಮತ್ತು ಗ್ರಾಮಸ್ಥರು ಎಷ್ಟೇ ಮನವೊಲಿಸಲು ಯತ್ನಿಸಿದರೂ ಆತ ಕೇಳಿಸಿಕೊಳ್ಳಲಿಲ್ಲ. ಅಂತ್ಯಸಂಸ್ಕಾರ ಮುಗಿಸಿದ ಬಳಿಕ ಎಲ್ಲದರ ಬಗ್ಗೆ ತೀರ್ಮಾನಿಸೋಣ ಎಂದರೂ ಕೇಳಲಿಲ್ಲ. ಒಂದು ಹಂತದಲ್ಲಿ ಆತ, ನನಗೆ ತಾಯಿಯ ಬಳೆಗಳನ್ನು ನೀಡದೇ ಹೋದಲ್ಲಿ ಈ ಚಿತೆಯಲ್ಲೇ ಸುಟ್ಟು ಹೋಗುತ್ತೇನೆಂದು ಬೆದರಿಕೆಯನ್ನೂ ಹಾಕಿದ್ದ. ಯಾವುದಕ್ಕೂ ಬಗ್ಗದ ಹಿನ್ನೆಲೆಯಲ್ಲಿ ಕೊನೆಗೆ ಗ್ರಾಮಸ್ಥರು ಮತ್ತು ಸಂಬಂಧಿಕರೆಲ್ಲರೂ ಸೇರಿ ಆತನನ್ನು ಒತ್ತಾಯಪೂರ್ವಕವಾಗಿ ಚಿತೆಯಿಂದ ಕೆಳಗೆ ಕರೆತರಬೇಕಾಯಿತು. ತದನಂತರವೂ ಆತ ಚಿತೆಯ ಪಕ್ಕದಲ್ಲೇ ಕುಳಿತು ಪ್ರತಿಭಟನೆ ಮುಂದುವರಿಸಿದ್ದ.
ಪಟ್ಟು ಬಿಡದ ಕಾರಣ ಕೊನೆಗೆ ಅಮ್ಮನ ಆಭರಣಗಳನ್ನು ಆತನಿಗೆ ಹಸ್ತಾಂತರಿಸಿ, ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಈ ಎಲ್ಲ ಬೆಳವಣಿಗೆಯಿಂದಾಗಿ ಮಧ್ಯಾಹ್ನ ನಡೆಯಬೇಕಿದ್ದ ಅಂತ್ಯಸಂಸ್ಕಾರ ಮುಗಿಯುವಾಗ ಸಂಜೆಯಾಗಿತ್ತು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಓಂ ಪ್ರಕಾಶ್ ಅವರ ದುರಾಸೆ ಬಗ್ಗೆ ಅನೇಕರು ಆಕ್ರೋಶ ಹೊರಹಾಕಿದ್ದಾರೆ.