ಮುಂಬೈ: ಮಹಾರಾಷ್ಟ್ರ ಸರ್ಕಾರ ಆಯೋಜಿಸಿದ್ದ ಇತ್ತೀಚಿನ ಕಾರ್ಯಕ್ರಮವೊಂದು ಈಗ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ರಾಜ್ಯವು ಗಂಭೀರ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವಾಗ, ಈ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಬೆಳ್ಳಿ ತಟ್ಟೆಗಳಲ್ಲಿ ಊಟ ಬಡಿಸಿದ್ದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. “ಇದು ತೆರಿಗೆದಾರರ ಹಣದ ದುಂದುವೆಚ್ಚ” ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮತ್ತು ಹಲವಾರು ಸಾಮಾಜಿಕ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮತ್ತು ಸಾಮಾಜಿಕ ಕಾರ್ಯಕರ್ತರ ಆರೋಪಗಳ ಪ್ರಕಾರ, ಈ ಕಾರ್ಯಕ್ರಮದಲ್ಲಿ ಬಡಿಸಿದ ಪ್ರತಿ ಊಟಕ್ಕೆ 5,000 ರೂ. ವೆಚ್ಚವಾಗಿದೆ. ಇದಲ್ಲದೆ, ಊಟ ಬಡಿಸಲು ಬಳಸಿದ ಬೆಳ್ಳಿ ತಟ್ಟೆಗಳನ್ನು ಬಾಡಿಗೆಗೆ ಪಡೆಯಲಾಗಿದ್ದು, ಪ್ರತಿ ತಟ್ಟೆಗೆ 550ರೂ. ಪಾವತಿಸಲಾಗಿದೆ. ಹೀಗೆ, 600 ಅತಿಥಿಗಳಿಗೆ ಬಡಿಸಿದ ಊಟದ ಒಟ್ಟು ವೆಚ್ಚ 27 ಲಕ್ಷ ರೂ. ತಲುಪಿದೆ ಎಂದು ಅವರು ಅಂದಾಜಿಸಿದ್ದಾರೆ.
ಮಹಾರಾಷ್ಟ್ರದ ಪ್ರತಿಪಕ್ಷ ನಾಯಕರಾದ ವಿಜಯ್ ವಡೆಟ್ಟಿವಾರ್ ಮತ್ತು ಹರ್ಷವರ್ಧನ್ ಸಪ್ಕಾಲ್ ಈ ಅತಿಯಾದ ವೆಚ್ಚವನ್ನು ತೀವ್ರವಾಗಿ ಖಂಡಿಸಿದ್ದಾರೆ. “ರಾಜ್ಯದ ರೈತರು ಸಾಲ ಮನ್ನಾಕ್ಕಾಗಿ ಕಾಯುತ್ತಿದ್ದಾರೆ, ಅನೇಕ ಕಲ್ಯಾಣ ಯೋಜನೆಗಳಿಗೆ ಬಜೆಟ್ ಕಡಿತ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಐಷಾರಾಮಿ ಊಟಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದು ಎಷ್ಟು ಸರಿ?” ಎಂದು ಅವರು ಪ್ರಶ್ನಿಸಿದ್ದಾರೆ. “ಇದು ಜನಸಾಮಾನ್ಯರ ಕಷ್ಟಕ್ಕೆ ಬೆಲೆ ಕೊಡದ ವರ್ತನೆ” ಎಂದು ಸಪ್ಕಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಕುಂಬಾರ್ ಕೂಡ ಇದನ್ನು “ರಾಯಲ್ ಮಾಖರಿ” (ರಾಜಮರ್ಯಾದೆಯ ಅಪಹಾಸ್ಯ) ಎಂದು ಬಣ್ಣಿಸಿದ್ದಾರೆ.
ಸರ್ಕಾರದ ಸಮರ್ಥನೆ:
ಆದಾಗ್ಯೂ, ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಿದ್ದು, ಊಟ ಬಡಿಸಲು ಬಳಸಿದ ತಟ್ಟೆಗಳು ಕೇವಲ ಬೆಳ್ಳಿ ಲೇಪಿತವಾಗಿದ್ದವೇ ವಿನಃ ಪೂರ್ಣ ಪ್ರಮಾಣದಲ್ಲಿ ಬೆಳ್ಳಿಯದ್ದಾಗಿರಲಿಲ್ಲ. ಅಲ್ಲದೆ, ಪ್ರತಿ ಊಟದ ನೈಜ ವೆಚ್ಚ 4,000ರೂ.ಗಿಂತ ಕಡಿಮೆಯಿತ್ತು ಎಂದಿದೆ.
ಸದ್ಯಕ್ಕೆ ಈ ವಿಷಯ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ಮುಂದುವರಿದಿವೆ. ಈ ವಿವಾದವು ಮುಂಬರುವ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕು.