ಚಾಮರಾಜನಗರ: ಮಹಿಳೆಯೋರ್ವಳು ಪತಿ, ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಿ ಹೆಣವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಇತ್ತೀಚೆಗಷ್ಟೇ ಹೊಳೆ ದಡದಲ್ಲಿ ಒಂಟಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿತ್ತು. ಸದ್ಯ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಿಯಕರ ಹತ್ಯೆ ಮಾಡಿರುವ ವಿಷಯ ಪೊಲೀಸರು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಸೋನಾಕ್ಷಿ ಸಾವನ್ನಪ್ಪಿರುವ ಮಹಿಳೆ. ಕೊಲೆಯಾಗಿರುವ ಮಹಿಳೆಯೊಂದಿಗೆ ಮಾದೇಶ ಎಂಬಾತ ಸ್ನೇಹ ಬೆಳೆಸಿದ್ದ. ಆದರೆ, ಸೋನಾಕ್ಷಿ ಮಾತ್ರ ಪ್ರಿಯಕರ ಮಾದೇಶನಿಗೂ ಕೈ ಕೊಟ್ಟು ಬೇರೆಯವನ ಜೊತೆ ಲವ್ವಿಡವ್ವಿಯಲ್ಲಿದ್ದಳು ಎನ್ನಲಾಗಿದೆ. ಹೀಗಾಗಿ ಕೊಳ್ಳೇಗಾಲದಿಂದ ಹೋಗಿ ಟಿ. ನರಸೀಪುರದಲ್ಲಿ ಸೋನಾಕ್ಷಿ ವಾಸವಿದ್ದಳು.
ಈ ವಿಷಯವನ್ನು ಪ್ರಿಯಕರ ಮಾದೇಶ, ಸೋನಾಕ್ಷಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ. ಈ ವಿಷಯವಾಗಿ ಪ್ರಿಯಕರ ಮಾದೇಶ ಹಾಗೂ ಸೋನಾಕ್ಷಿ ಮಧ್ಯೆ ಕಿರಿಕ್ ನಡೆದಿದೆ. ಇದೇ ವಿಷಯವಾಗಿ ಮಾತನಾಡಲು ಮಾದೇಶ ತನ್ನ ಮನೆಗೆ ಸೋನಾಕ್ಷಿಯನ್ನು ಕರೆಯಿಸಿದ್ದಾನೆ. ಆಗ ಇಬ್ಬರ ಮಧ್ಯೆ ಜಗಳ ನಡೆದಿದೆ. ಕೋಪದಲ್ಲಿ ಮಾದೇಶ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಕೊಲೆಯಾದ ನಂತರ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಹಳೇ ಹಂಪಾಪುರದ ಸನಿಹದ ಸುವರ್ಣಾವತಿ ಹೊಳೆಯ ಬಳಿ ತಂದು ಮೃತದೇಹವನ್ನು ಹೂತಿದ್ದಾನೆ. ಆರೋಪಿಯನ್ನು ಬಂಧಿಸಿರುವ ಕೊಳ್ಳೇಗಾಲ ಪಟ್ಟಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.