ಲಕ್ನೋ: ಪಹಲ್ಗಾಮ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿರುವ ಜನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ವಿರುದ್ಧ ಉತ್ತರಪ್ರದೇಶದ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. ಅವರು ಹಾಕಿರುವ ಪೋಸ್ಟ್ ರಾಷ್ಟ್ರದ ಏಕತೆಗೆ ಧಕ್ಕೆ ತರಬಹುದು ಎಂಬ ದೂರಿನ ಮೇರೆಗೆ ನೇಹಾ ಸಿಂಗ್ ವಿರುದ್ಧ ಈ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ ವಾರ ಪಹಲ್ಗಾಮ್ನ ಬೈಸರನ್ ಕಣಿವೆ ಪ್ರದೇಶಕ್ಕೆ ನುಗ್ಗಿದ ಭಯೋತ್ಪಾದಕರು, 26 ಜನ ಪ್ರವಾಸಿಗರನ್ನು ಅವರ ಧರ್ಮ ಕೇಳಿ ಹತ್ಯೆಗೈದಿದ್ದರು. ಈ ಘಟನೆಯು ಇಡೀ ದೇಶವನ್ನೇ ಮರುಕಕ್ಕೆ ನೂಕಿದೆ. ಇಂತಹ ಸಂದರ್ಭದಲ್ಲಿ ಜನಪದ ಗಾಯಕಿ ಹಾಗೂ ಕವಯಿತ್ರಿ ನೇಹಾ ಸಿಂಗ್ ರಾಥೋಡ್ ಅವರು ತಮ್ಮ ಟ್ವೀಟರ್ ಹ್ಯಾಂಡಲ್ @nehafolksinger ಮೂಲಕ ರಾಷ್ಟ್ರೀಯ ಸಮಗ್ರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವಂಥ ಕೆಲವು ಆಕ್ಷೇಪಾರ್ಹ ಪೋಸ್ಟ್ ಗಳನ್ನು ಮಾಡಿದ್ದಾರೆ. ಜೊತೆಗೆ ಧರ್ಮದ ಆಧಾರದಲ್ಲಿ ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಪ್ರಚೋದಿಸಲು ನಿರಂತರವಾಗಿ ಪ್ರಯತ್ನಿಸಿದ್ದಾರೆ” ಎಂದು ದೂರುದಾರ ಅಭಯ್ ಪ್ರತಾಪ್ ಸಿಂಗ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಲಕ್ನೋದ ಹಜರತ್ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ದೂರಿನ ಆಧಾರದ ಮೇಲೆ, ಪಂಥೀಯ ದ್ವೇಷವನ್ನು ಉತ್ತೇಜಿಸಲು ಪ್ರಯತ್ನಿಸುವುದು, ಸಾರ್ವಜನಿಕ ಶಾಂತಿಗೆ ಭಂಗ ತರುವುದು ಮತ್ತು ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವುದು ಸೇರಿದಂತೆ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಅಡಿಯಲ್ಲಿ ಜಾನಪದ ಗಾಯಕಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.