ಮೈಸೂರು ಸ್ಯಾಂಡಲ್ ವುಡ್ ಸೋಪ್ ರಾಯಭಾರಿಯಾಗಿ ನಟಿ ತಮನ್ನಾ ಅವರನ್ನು ಆಯ್ಕೆ ಮಾಡಿದ್ದಕ್ಕೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ರಾಜರು ಹುಟ್ಟು ಹಾಕಿದ ಸಂಸ್ಥೆ ಇದು. ನಂದಿನಿಗೆ ಕನ್ನಡದ ನಟರಾದ ರಾಜಕುಮಾರ್, ಪುನೀತ್ ರಾಜಕುಮಾರ್ ಅಂಬಾಸಿಡರ್ ಆಗಿದ್ದರು. ಆದರೆ, ಸ್ಯಾಂಡಲ್ ಸೋಪಿಗೆ ಬೇರೆ ಭಾಷೆಯ ನಟಿಯನ್ನು ಆರು ಕೋಟಿ ಖರ್ಚು ಮಾಡಿ ಅಂಬಾಸಿಡರ್ ಮಾಡಿರುವುದು ಸರಿಯಲ್ಲ. ಬೇಕಾದರೆ ತಮನ್ನಾ ಹಾಕಿಕೊಂಡು ಎಂ.ಬಿ. ಪಾಟೀಲ್ ಸಿನಿಮಾ ಮಾಡಲಿ. ಇವತ್ತು ಕನ್ನಡದಲ್ಲಿ ಸಾಕಷ್ಟು ನಟಿಯರಿದ್ದಾರೆ. ಸುದೀಪ್, ಯಶ್ ಪ್ಯಾನ್ ಇಂಡಿಯಾ ಹೀರೋಗಳಿದ್ದಾರೆ. ಕೇವಲ ಆರು ಕೋಟಿ ಅಷ್ಟೇ ಅಲ್ಲ. ಶೂಟ್ ಅಂತ ಹೇಳಿ ಮತ್ತೆ 2 ಕೋಟಿ ರೂ. ಖರ್ಚು ಮಾಡಿದ್ದಾರೆ. ಈ ಹಣವನ್ನು ಮಳೆಯಿಂದ ಹಾನಿಗೊಳಗಾದ ಜಾಗಕ್ಕೆ ಬಳಸಬಹುದು ಎಂದು ಕಿಡಿಕಾರಿದ್ದಾರೆ.
ಆ ಹಣವನ್ನು ಕನ್ನಡ ಶಾಲೆಗಳ ಅಭಿವೃದ್ಧಿಗೆ ಬಳಸಬಹುದಿತ್ತು. ನಮ್ಮ ಕನ್ನಡದ ನಟ- ನಟಿಯರು ಉಚಿತವಾಗಿ ನಟಿಸುತ್ತಿದ್ದರು. ಹಿಂದೆ ಸಂಸ್ಥೆಯು 400-500 ಕೋಟಿ ರೂ. ಲಾಭ ಮಾಡಿದಾಗ ಯಾವ ಅಂಬಾಸಿಡರ್ ಇದ್ದರು? ಎಂದು ಪ್ರಶ್ನಿಸಿದ್ದಾರೆ.
ಈ ಮೊದಲು ಧೋನಿಯವರನ್ನು ಸಂಪರ್ಕಿಸಿದ್ದರು. ಅವರು ಸಿಕ್ಕಿಲ್ಲ ಅಂತ ತಮನ್ನಾ ಅವರನ್ನು ಕರೆದುಕೊಂಡು ಬಂದಿದ್ದರು. ಮೈಸೂರು ಸ್ಯಾಂಡಲ್ ಬಗ್ಗೆ ಇಡೀ ದೇಶವೇ ಮಾತನಾಡುತ್ತೆ. ಈ ರೀತಿ ಪರಭಾಷಾ ನಟಿಯನ್ನು ಬಳಕೆ ಮಾಡಿರುವುದನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.