ನಿವೃತ್ತ ಡಿಜಿ ಓಂ ಪ್ರಕಾಶ್ ಪತ್ನಿಯಿಂದಲೇ ಭೀಕರ ಹತ್ಯೆ ನಡೆದಿದೆ. ಘಟನೆಯಲ್ಲಿ ಓಂ ಪ್ರಕಾಶ್ ಹತ್ಯೆಯಾಗಿದ್ದು, ದೇಹದ ಮೂರು ಕಡೆ ಚಾಕುವಿನಿಂದ ಇರಿಯಲಾಗಿದೆ ಎಂದು ತಿಳಿದು ಬಂದಿದೆ.
1981ರ ಬ್ಯಾಚ್ ಐಪಿಎಸ್ ಅಧಿಕಾರಿ ಓಂ ಪ್ರಕಾಶ್, ಕರ್ನಾಟಕದ 38ನೇ ಡಿಜಿ ಐಜಿಪಿಯಾಗಿದ್ದರು. ಡಿಜಿ ಮತ್ತು ಐಜಿಪಿಯಾಗಿ ಗೃಹರಕ್ಷಕ ದಳ ಮತ್ತು ಅಗ್ನಿಶಾಮಕ ದಳದ ಮಹಾನಿರ್ದೇಶಕರಾಗಿದ್ದರು. 2017ರಲ್ಲಿ ಓಂ ಪ್ರಕಾಶ ನಿವೃತ್ತಿ ಹೊಂದಿದ್ದರು.
ಓಂ ಪ್ರಕಾಶ್ ಬಿಹಾರದ ಚಂಪಾರಣ್ ಜಿಲ್ಲೆಯ ಪಿಪ್ರಾಸಿ ಗ್ರಾಮದವರಾಗಿದ್ದರು. ಭೂ ವಿಜ್ಞಾನದಲ್ಲಿ ಎಂಎಸ್ಸಿ ಪದವೀಧರರಾಗಿದ್ದಾರೆ. ರಾಷ್ಟ್ರಪತಿಗಳ ಪೊಲೀಸ್ ಪದಕವನ್ನೂ ಓಂ ಪ್ರಕಾಶ್ ಪಡೆದಿದ್ದಾರೆ. ಭಯೋತ್ಪಾದನೆ ಮತ್ತು ಸಂಚಾರ ಸಮಸ್ಯೆಗಳ ಬಗ್ಗೆ ಹರಿಸಲು ಓಂ ಪ್ರಕಾಶ ಸಾಕಷ್ಟು ಕೆಲಸ ಮಾಡಿದ್ದಾರೆ. ಹಲವಾರು ಶಂಕಿತ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪತ್ನಿ ಪಲ್ಲವಿ ಕಳೆದ ಮೂರು ದಿನಗಳ ಹಿಂದೆಯಷ್ಟೇ ವಾಟ್ಸಾಪ್ ನಲ್ಲಿ ಮೆಸೆಜ್ ಮಾಡಿದ್ದರು ಎನ್ನಲಾಗಿದೆ. ನನ್ನ ಪತಿ ನನಗೆ, ಮಗಳಿಗೆ ತುಂಬಾ ಚಿತ್ರಹಿಂಸೆ ಕೊಡುತ್ತಿದ್ದಾರೆ. ಮನೆಯಲ್ಲಿ ಗನ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಗನ್ ನಲ್ಲಿ ಶೂಟ್ ಮಾಡಿ ಕೊಲೆ ಮಾಡ್ತೀನಿ ಎಂದು ಭಯ ಪಡಿಸುತ್ತಿದ್ದಾರೆ. ನನ್ನ ಪತಿ ವಿರುದ್ದ ಸುಮೊಟೋ ಕೇಸ್ ದಾಖಲಿಸಿ ಎಂದು ಪರಿಚಿತ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಾಟ್ಸಾಪ್ ಮೆಸೆಜ್ ಮಾಡಿದ್ದರು ಎನ್ನಲಾಗಿದೆ.
ಸದ್ಯ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ದಯಾನಂದ್ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸ್ಥಳಕ್ಕೆ ದೌಡಾಯಿಸಿದ್ದಾರೆ. ಗೃಹ ಸಚಿವರು ಕೂಡ ಮಾಜಿ ಪೊಲೀಸ್ ಮಹಾ ನಿರ್ದೇಶಕರ ಕೊಲೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಓಂ ಪ್ರಕಾಶ್ ಗೆ ಒಟ್ಟು ಇಬ್ಬರು ಮಕ್ಕಳಿದ್ದಾರೆ. ಕಾರ್ತಿಕೇಶ್ ಮಗ ಆಗಿದ್ದು ಬೆಂಗಳೂರಿನಲ್ಲಿ ನೆಲಸಿದ್ದಾರೆ. ಪತ್ನಿ ಹಾಗೂ ಓಂ ಪ್ರಕಾಶ್ ನಡುವೆ ಜಗಳ ನಡೆಯುತ್ತಿತ್ತು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಓಂ ಪ್ರಕಾಶ್ ಪತ್ನಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಸಾಕಷ್ಟು ಆಸ್ತಿ ಪಾಸ್ತಿ ಹೊಂದಿದ್ದ ಓಂ ಪ್ರಕಾಶ್ ಹಾಗೂ ಮಕ್ಕಳ ಮಧ್ಯೆ ಭಿನ್ನಾಭಿಪ್ರಾಯ ಕೂಡ ಇತ್ತು. ಮಹಿಳೆಯ ವಿಚಾರವಾಗಿ ಓಂ ಪ್ರಕಾಶ್ ಹಾಗೂ ಪತ್ನಿಯ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.