ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ಪವಿತ್ರಾ ಗೌಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಕೋರ್ಟ್ ವಿಚಾರಣೆ ಮುಂದೂಡಿದೆ. ಹೀಗಾಗಿ ಇನ್ನೂ ಕೆಲವು ದಿನ ಜೈಲೇ ಗತಿ ಎನ್ನುವಂತಾಗಿದೆ.
ಬೇಲ್ ಪಡೆಯಲು ಪವಿತ್ರಾಗೌಡ ಅರ್ಜಿ ಸಲ್ಲಿಸಿದ್ದಾರೆ. ಆದರೆ ಎರಡನೇ ಬಾರಿಗೆ ಅವರ ಅರ್ಜಿ ವಿಚಾರಣೆ ಮುಂದೂಡಿಕೆ ಆಗಿದೆ. ಆಗಸ್ಟ್ 27ಕ್ಕೆ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಪವಿತ್ರಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಂದೂಡಿ ನ್ಯಾಯಾಧೀಶ ಜೈಶಂಕರ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಇನ್ನೂ ಹಲವು ದಿನ ಪವಿತ್ರಾಗೆ ಜೈಲೇ ಗತಿ ಎನ್ನುವಂತಾಗಿದೆ.
ಪವಿತ್ರಾ ಗೌಡಗೆ ಜಾಮೀನು ನೀಡದಂತೆ ಎಸ್ ಪಿಪಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನನ್ನು ಕೊಲೆ ಮಾಡಿಸಿದ ಆರೋಪ ಪವಿತ್ರಾಗೌಡ ಮೇಲಿದೆ. ದರ್ಶನ್ ಕೂಡ ಪ್ರಮುಖ ಆರೋಪಿ. ಈ ಪ್ರಕರಣದಲ್ಲಿ ಒಟ್ಟು 17 ಜನ ಜೈಲು ಸೇರಿದ್ದಾರೆ. ಇವರೆಲ್ಲ ಪ್ರಭಾವಿ ವ್ಯಕ್ತಿಗಳಾಗಿದ್ದರಿಂದಾಗಿ ಜಾಮೀನು ಸಿಕ್ಕರೆ ಸಾಕ್ಷಿ ನಾಶಕ್ಕೆ ಪ್ರಯತ್ನಿಸುವ ಸಾಧ್ಯತೆ ಇದೆ. ಹೀಗಾಗಿ ಜಾಮೀನು ನೀಡದಂತೆ ಪೊಲೀಸರು ಆಕ್ಷೇಪಣೆ ಸಲ್ಲಿಸಿದ್ದಾರೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ಈ ಕೇಸ್ ನಲ್ಲಿ ಪವಿತ್ರಾ ಗೌಡ ಅವರನ್ನು ಎ1 ಎಂದು ಪರಿಗಣಿಸಲಾಗಿತ್ತು. ಆದರೆ ಚಾರ್ಜ್ಶೀಟ್ನಲ್ಲಿ ದರ್ಶನ್ ಅವರನ್ನು ಎ1 ಎಂದು ಉಲ್ಲೇಖಿಸುವ ಸಾಧ್ಯತೆ ಇದೆ. ಅವರೇ ಈ ಕೊಲೆಯ ಸೂತ್ರಧಾರ ಎಂಬುವುದುಕ್ಕೆ ಪೊಲೀಸರಿಗೆ ಹಲವು ಸಾಕ್ಷಿಗಳು ಸಿಕ್ಕಿವೆ.
ಎಫ್ಎಸ್ಎಲ್ ವರದಿಯಲ್ಲಿ ನಟನ ವಿರುದ್ಧ ಪ್ರಮುಖ ಸಾಕ್ಷಿಗಳು ದೊರೆತಿವೆ. ಆರೋಪಿಗಳ ವಿರುದ್ಧ ಅಂದಾಜು 4 ಸಾವಿರ ಪುಟಗಳ ಚಾರ್ಜ್ಶೀಟ್ ಸಿದ್ಧವಾಗಿದೆ. ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್ನಿಂದ ಶಾಕಿಂಗ್ ಫೋಟೋಗಳು ಕೂಡ ಬಯಲಾಗಿವೆ ಎನ್ನಲಾಗಿದೆ.