ಬೆಂಗಳೂರು: ಭಾರತ-ಪಾಕಿಸ್ತಾನ ಗಡಿಯಲ್ಲಿ ಉಂಟಾಗಿದ್ದ ಉದ್ವಿಗ್ನತೆಯ ಕಾರಣದಿಂದಾಗಿ ಸುಮಾರು 10 ದಿನಗಳ ಕಾಲ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಆವೃತ್ತಿಯು ಇಂದು (ಮೇ 17ರಂದು) ಮತ್ತೆ ಆರಂಭಗೊಳ್ಳಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವಿನ ಹೈ-ವೋಲ್ಟೇಜ್ ಪಂದ್ಯದೊಂದಿಗೆ ಟೂರ್ನಿ ಪುನರಾರಂಭವಾಗಲಿದೆ.
ಈ ಪಂದ್ಯವು ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ನಂತರ ಆಡುತ್ತಿರುವ ಮೊದಲ ಐಪಿಎಲ್ ಪಂದ್ಯವಾಗಿದೆ. ಆರ್ಸಿಬಿ ತಂಡಕ್ಕೆ ಇದು ಮಹತ್ವದ ಪಂದ್ಯವಾಗಿದ್ದು, ತವರು ನೆಲವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2015 ರ ನಂತರ ಕೆಕೆಆರ್ ವಿರುದ್ಧ ಮೊದಲ ಗೆಲುವು ಸಾಧಿಸುವ ಗುರಿಯನ್ನು ಹೊಂದಿದೆ. ರಜತ್ ಪಾಟಿದಾರ್ ನಾಯಕತ್ವದ ಆರ್ಸಿಬಿ, ಈ ಋತುವಿನಲ್ಲಿ ಸ್ಥಿರ ಪ್ರದರ್ಶನ ನೀಡಿ ಪ್ಲೇಆಫ್ ಹಂತಕ್ಕೆ ಹತ್ತಿರದಲ್ಲಿದೆ.
ಆರ್ಸಿಬಿ ಸ್ಥಿತಿ ಮತ್ತು ಪ್ಲೇಆಫ್ ಲೆಕ್ಕಾಚಾರ
ಈ ಋತುವಿನಲ್ಲಿ ಆರ್ಸಿಬಿ ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 8 ಗೆಲುವುಗಳನ್ನು ಸಾಧಿಸಿ 16 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿದೆ. ಉಳಿದಿರುವ ಮೂರು ಲೀಗ್ ಪಂದ್ಯಗಳಲ್ಲಿ ಒಂದು ಅಥವಾ ಎರಡು ಗೆಲುವುಗಳು ತಂಡದ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಬಹುದು ಮತ್ತು ಅಗ್ರ ಎರಡರೊಳಗೆ ಸ್ಥಾನ ಪಡೆಯಲು ಸಹಾಯ ಮಾಡಬಹುದು, ಇದು ಫೈನಲ್ಗೆ ತಲುಪಲು ಉತ್ತಮ ಅವಕಾಶವನ್ನು ನೀಡುತ್ತದೆ.
ಕೆಕೆಆರ್ ವಿರುದ್ಧ ಆರ್ಸಿಬಿಯ ಇತ್ತೀಚಿನ ದಾಖಲೆಗಳು ಆರ್ಸಿಬಿ ಅಭಿಮಾನಿಗಳಿಗೆ ಆತಂಕ ತಂದಿದೆ. ಕಳೆದ ಏಳು ಪಂದ್ಯಗಳಲ್ಲಿ ಕೆಕೆಆರ್ ಆರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಆರ್ಸಿಬಿ ಕೇವಲ ಒಂದು ಪಂದ್ಯದಲ್ಲಿ ಗೆದ್ದಿದೆ. ವಿಶೇಷವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಕೆಆರ್ ವಿರುದ್ಧ ಆರ್ಸಿಬಿ ಕೊನೆಯ ಗೆಲುವು 2015 ರಲ್ಲಿ ಬಂದಿತ್ತು, ಇದು ಇಂದಿನ ಪಂದ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ.
ನಾಯಕ ರಜತ್ ಪಾಟಿದಾರ್ ಗಾಯದ ಆತಂಕ
ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬೆರಳಿಗೆ ಗಾಯ ಮಾಡಿಕೊಂಡಿದ್ದು, ಇಂದಿನ ಪಂದ್ಯದಲ್ಲಿ ಅವರ ಪಾಲ್ಗೊಳ್ಳುವಿಕೆ ಅನುಮಾನದಲ್ಲಿದೆ. ಒಂದು ವೇಳೆ ಪಾಟಿದಾರ್ ಆಡಲು ಅಲಭ್ಯರಾದರೆ, ವಿಕೆಟ್ಕೀಪರ್-ಬ್ಯಾಟ್ಸ್ಮನ್ ಜಿತೇಶ್ ಶರ್ಮಾ ತಂಡದ ನಾಯಕತ್ವ ವಹಿಸುವ ಸಾಧ್ಯತೆಯಿದೆ. ಜಿತೇಶ್ ಈ ಋತುವಿನಲ್ಲಿ ಈಗಾಗಲೇ ಒಂದು ಪಂದ್ಯದಲ್ಲಿ ಆರ್ಸಿಬಿಯನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಪಾಟಿದಾರ್ ಇತ್ತೀಚೆಗೆ ತರಬೇತಿ ಸೆಷನ್ಗಳಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದು, ಅವರ ಫಿಟ್ನೆಸ್ ಬಗ್ಗೆ ಸಕಾರಾತ್ಮಕ ವರದಿಗಳಿವೆ, ಆದರೆ ಅಂತಿಮ ನಿರ್ಧಾರ ಪಂದ್ಯದ ಮುನ್ನ ತೆಗೆದುಕೊಳ್ಳಲಾಗುವುದು.
ತಂಡದ ಸಂಯೋಜನೆ?
ಆರ್ಸಿಬಿ (ಸಂಭಾವ್ಯ ಆಡುವ XI): ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್ / ಜಿತೇಶ್ ಶರ್ಮಾ (ನಾಯಕ), ಜಿತೇಶ್ ಶರ್ಮಾ / ಅನೂಜ್ ರಾವತ್ (ವಿಕೆಟ್ಕೀಪರ್), ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಲುಂಗಿ ಎನ್ಗಿಡಿ, ಯಶ್ ದಯಾಲ್, ಸುಯಾಶ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್).
ಕೆಕೆಆರ್ (ಸಂಭಾವ್ಯ ಆಡುವ XI): ರಹಮಾನುಲ್ಲಾ ಗುರ್ಬಾಜ್ (ವಿಕೆಟ್ಕೀಪರ್), ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ಅನುಕುಲ್ ರಾಯ್, ಹರ್ಷಿತ್ ರಾಣಾ, ವೈಭವ್ ಅರೋರಾ, ಸ್ಪೆನ್ಸರ್ ಜಾನ್ಸನ್, ವರುಣ್ ಚಕ್ರವರ್ತಿ (ಇಂಪ್ಯಾಕ್ಟ್ ಪ್ಲೇಯರ್).
ಕೊಯ್ಲಿಯೇ ಆಧಾರ
ಆರ್ಸಿಬಿ ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಆಧಾರಸ್ತಂಭವಾಗಿದ್ದಾರೆ. ಅವರು ಈ ಋತುವಿನಲ್ಲಿ 11 ಪಂದ್ಯಗಳಿಂದ 505 ರನ್ ಗಳಿಸಿದ್ದಾರೆ. ಕೆಕೆಆರ್ ವಿರುದ್ಧ ಕೊಹ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. 35 ಪಂದ್ಯಗಳಲ್ಲಿ 40.84 ಸರಾಸರಿಯಲ್ಲಿ 1021 ರನ್ ಗಳಿಸಿದ್ದು, ಇದರಲ್ಲಿ ಒಂದು ಶತಕ ಮತ್ತು ಏಳು ಅರ್ಧಶತಕಗಳು ಸೇರಿವೆ. ಫಿಲ್ ಸಾಲ್ಟ್ ಸ್ಫೋಟಕ ಆರಂಭ ನೀಡಬಲ್ಲವರಾಗಿದ್ದು, ಚಿನ್ನಸ್ವಾಮಿಯ ಸಣ್ಣ ಬೌಂಡರಿಗಳು ಅವರಿಗೆ ನೆರವಾಗಬಹುದು. ದೇವದತ್ ಪಡಿಕ್ಕಲ್ ಗಾಯದಿಂದಾಗಿ ಈಗಾಗಲೇ ಟೂರ್ನಿಯಿಂದ ಹೊರಗುಳಿದಿದ್ದು, ಮಯಾಂಕ್ ಅಗರ್ವಾಲ್ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಕೆಕೆಆರ್ ತಂಡವು ಮೊಯಿನ್ ಅಲಿ (ವೈಯಕ್ತಿಕ ಕಾರಣ) ಮತ್ತು ರೋವ್ಮನ್ ಪೊವೆಲ್ (ಗಾಯ) ಅವರ ಅಲಭ್ಯತೆಯಿಂದಾಗಿ ಸ್ವಲ್ಪ ಹಿನ್ನಡೆ ಅನುಭವಿಸಿದೆ. ಆದಾಗ್ಯೂ, ಸುನಿಲ್ ನರೈನ್, ಆಂಡ್ರೆ ರಸೆಲ್ ಮತ್ತು ವರುಣ್ ಚಕ್ರವರ್ತಿ ಅವರಂತಹ ಆಟಗಾರರು ತಂಡಕ್ಕೆ ಬಲ ತುಂಬುತ್ತಾರೆ.
ಪಿಚ್ ವರದಿ
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ಗೆ ಅತ್ಯುತ್ತಮವಾಗಿದ್ದು, ಹೈ-ಸ್ಕೋರಿಂಗ್ ಪಂದ್ಯಗಳನ್ನು ನಿರೀಕ್ಷಿಸಬಹುದು. ಆದರೆ, ಇತ್ತೀಚಿನ ಪಂದ್ಯಗಳಲ್ಲಿ ಪಿಚ್ ವೇಗಿಗಳಿಗೆ ಕೊಂಚ ನೆರವು ನೀಡಿದೆ. ಭುವನೇಶ್ವರ್ ಕುಮಾರ್ ಮತ್ತು ಲುಂಗಿ ಎನ್ಗಿಡಿ ಅವರಂತಹ ವೇಗಿಗಳು ಪರಿಣಾಮಕಾರಿ ಎನಿಸಬಹುದು. ಕೆಕೆಆರ್ನ ಸ್ಪಿನ್ನರ್ಗಳಾದ ನರೈನ್ ಮತ್ತು ಚಕ್ರವರ್ತಿಯು ಆರ್ಸಿಬಿಯ ಬ್ಯಾಟ್ಸ್ಮನ್ಗಳಿಗೆ ಸವಾಲೊಡ್ಡಬಹುದು. ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು, ಏಕೆಂದರೆ ಇಬ್ಬನಿ ಎರಡನೇ ಇನ್ನಿಂಗ್ಸ್ನಲ್ಲಿ ಪರಿಣಾಮ ಬೀರಬಹುದು.
ಕೊಹ್ಲಿಗೆ ಭಾವನಾತ್ಮಕ ಗೌರವ
ಇಂದಿನ ಪಂದ್ಯವು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ನಂತರ ಆಡುತ್ತಿರುವ ಮೊದಲ ಪಂದ್ಯವಾಗಿರುವುದರಿಂದ ಇದು ವಿಶೇಷ ಮಹತ್ವ ಪಡೆದಿದೆ. ಕೊಹ್ಲಿಯ ಟೆಸ್ಟ್ ವೃತ್ತಿಜೀವನವನ್ನು ಗೌರವಿಸಲು ಆರ್ಸಿಬಿ ಅಭಿಮಾನಿಗಳು ವಿಶಿಷ್ಟ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಹಲವು ಅಭಿಮಾನಿಗಳು ಕೊಹ್ಲಿಯ ಐಕಾನಿಕ್ ನಂ. 18 ರ ಟೆಸ್ಟ್ ಜರ್ಸಿಗಳನ್ನು ಧರಿಸಿ ಕ್ರೀಡಾಂಗಣಕ್ಕೆ ಬರುವಂತೆ ಕರೆ ನೀಡಿದ್ದಾರೆ. ಇದು ಕೊಹ್ಲಿ ಮತ್ತು ಅಭಿಮಾನಿಗಳಿಗೆ ಒಂದು ಭಾವನಾತ್ಮಕ ಕ್ಷಣವಾಗಲಿದೆ.