ಮಂಗಳೂರು: ಪುತ್ತೂರು ಬಿಜೆಪಿ ಮುಖಂಡನ ಪುತ್ರನ (Puttur BJP leader Son )ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಮಗುವಿಗೆ ಜನ್ಮ ನೀಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ಮುಖಂಡನ ಮಗ ಕೃಷ್ಣ ಜೆ ರಾವ್ ಎನ್ನುವಾತ ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭಿಣಿ ಮಾಡಿದ್ದಾನೆ. ಆನಂತರ ಕೈ ಕೊಟ್ಟು ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಯುವತಿ ಗರ್ಭಿಣಿಯಾದ ವಿಷಯ ಗೊತ್ತಾಗುತ್ತಿದ್ದಂತೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದ ಕೃಷ್ಣ ನಾಪತ್ತೆಯಾಗಿದ್ದಾನೆಂದು ಯುವತಿ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದರು.
ಯುವತಿ ಪೊಲೀಸರ ಮೊರೆ ಹೋಗುತ್ತಿದ್ದಂತೆ ಯುವಕ ನಾಪತ್ತೆಯಾಗಿದ್ದಾನೆ. ಈಗ ಸಂತ್ರಸ್ತೆ ಪುತ್ತೂರಿನ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ. ಇನ್ನೊಂದೆಡೆ ಮಗುವಿನ ಡಿಎನ್ ಎ ಪರೀಕ್ಷೆಗೂ ಮುಂದಾಗಿದ್ದಾರೆ.
ಡಿಎನ್ ಎ ಪರೀಕ್ಷೆಯಿಂದ ನಿಜವಾಗಿಯೂ ಮಗುವಿನ ತಂದೆ ಯಾರು ಎಂಬ ಅಂಶ ಬಯಲಾಗಲಿದೆ. ಕೃಷ್ಣ, ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ಕೈ ಕೊಟ್ಟಿದ್ದು ಸತ್ಯವಾ? ಎಂಬ ಅಂಶ ಕೂಡ ಡಿಎನ್ ಎ ಪರೀಕ್ಷೆಯಿಂದ ಬಯಲಾಗಲಿದೆ. ಹೀಗಾಗಿಯೇ ಪೊಲೀಸರು ಈ ಪರೀಕ್ಷೆಗೆ ಮುಂದಾಗಿದ್ದಾರೆ. ಇದರೊಂದಿಗೆ ಆರೋಪಿಯ ಪತ್ತೆಗೂ ಬಲೆ ಬೀಸಿದ್ದಾರೆ.
ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ ರಾವ ಎಂಬಾತನ ವಿರುದ್ಧವೇ ಈ ಆರೋಪ ಕೇಳಿ ಬಂದಿದೆ. ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿದ್ದಾನೆ ಎಂದು ಸಂತ್ರಸ್ತ ವಿದ್ಯಾರ್ಥಿನಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಕೃಷ್ಣ ಕಣ್ಮರೆಯಾಗಿದ್ದಾನೆ. ಈ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಯುವತಿ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾರೆ ಎನ್ನಲಾಗಿದೆ. ಶಾಲಾ ದಿನಗಳಿಂದಲೇ ಇವರಿಬ್ಬರ ಮಧ್ಯೆ ಪ್ರೀತಿ ಅಂಕುರವಾಗಿತ್ತು ಎನ್ನಲಾಗಿದೆ. ಕಳೆದ ವರ್ಷ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಗೆ ಯುವಕ, ಯುವತಿಯನ್ನು ಕರೆಯಿಸಿ ಲೈಂಗಿಕವಾಗಿ ಬಳಕೆ ಮಾಡಿಕಂಡಿದ್ದ ಎಂದು ಯುವತಿ ಆರೋಪಿಸಿದ್ದಾರೆ. ಅಲ್ಲದೇ, ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆಂದು ಯುವತಿ ದೂರು ದಾಖಲಿಸಿದ್ದಾಳೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.