ಗುಜರಾತ್ ವಿಮಾನ ದುರಂತದಲ್ಲಿ 265ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರ ಒಬ್ಬೊಬ್ಬರ ಕಥೆ ಒಂದೊಂದು ರೀತಿಯಾಗಿದೆ. ಪ್ರಾಣ ತೆತ್ತವರಲ್ಲಿ ರಂಜಿತಾ ಎಂಬ ಮಹಿಳೆ ಕೂಡ ಸಾವನ್ನಪ್ಪಿದ್ದಾರೆ.

ಘೋರ ದುರಂತದಲ್ಲಿ ಕೇರಳ ಮೂಲದ ನರ್ಸ್ ರಂಜಿತಾ ಸಾವನ್ನಪ್ಪಿದ್ದಾರೆ. ಕನಸಿನ ಮನೆಗೆ ಕಾಲಿಡುವ ಮೊದಲೇ ರಂಜಿತಾ ಸಾವಿನ ಮನೆಯ ಕದ ತಟ್ಟಿದ್ದಾರೆ. ಮಕ್ಕಳ ಜೊತೆ ಖುಷಿಯ ಕ್ಷಣ ಕಳೆಯುತ್ತ ಹೋಗುತ್ತಿದ್ದ ವೇಳೆಯೇ ದುರಂತ ಘಟನೆ ನಡೆದಿದೆ. ಅಹಮದಾಬಾದ್ ಏರ್ಪೋರ್ಟ್ ಹತ್ತಿರ ಈ ದುರಂತ ಸಂಭವಿಸಿದೆ.
ರಂಜಿತಾ ಲಂಡನ್ ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ನಾಲ್ಕು ದಿನಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ನಿನ್ನೆ ಇಬ್ಬರು ಮಕ್ಕಳನ್ನ ಸ್ಕೂಲ್ ಗೆ ಕಳುಹಿಸಿ ಲಂಡನ್ ಗೆ ಹೊರಟ್ಟಿದ್ದರು. ಜುಲೈನಲ್ಲಿ ಹೊಸ ಮನೆಯಲ್ಲಿ ಬದುಕು ಕಟ್ಟಲು ರಂಜಿತಾ ಕನಸು ಕಂಡಿದ್ದರು.
ಈಗಾಗಲೇ ಮನೆಯ ಬಹುತೇಕ ಕೆಲಸ ಕಂಪ್ಲೀಟ್ ಆಗಿತ್ತು. ಆದರೆ, ಘೋರ ದುರಂತದಲ್ಲಿ ರಂಜಿತಾ ಉಸಿರು ಚೆಲ್ಲಿದ್ದಾರೆ. ಮನೆಗೆ ಆಸರೆಯಾಗಿದ್ದ ರಂಜಿತಾ ಕಳೆದುಕೊಂಡು ಕುಟುಂಬಸ್ಥರು ಕಣ್ಣೀರು ಸುರಿಸುತ್ತಿದ್ದಾರೆ.
ಕೇರಳದ ಪಥನಂತಿಟ್ಟ ಜಿಲ್ಲೆಯ ತಿರುವಲ್ಲಾ ಗ್ರಾಮದವರಾದ ರಂಜಿತಾ, ದೂರದ ಊರಿಗೆ ಹೋಗಿ ದುಡಿದು ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದರು. ರಂಜಿತಾ ತಂದೆ ಮೃತರಾಗಿದ್ದಾರೆ. ತಾಯಿಗೆ ಕ್ಯಾನ್ಸರ್ ಇತ್ತು.
ರಂಜಿತಾಗೆ ದುಡಿಮೆಯೇ ಆಧಾರ. ಮನೆ ನಿರ್ಮಾಣ,ಮಕ್ಕಳ ವಿಧ್ಯಾಭ್ಯಾಸ, ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಹಣ ಎಲ್ಲವನ್ನೂ ರಂಜಿತಾ ನೋಡಿಕೊಳ್ಳುತ್ತಿದ್ದರು. ಇವುಗಳ ಮಧ್ಯೆಯೇ ರಂಜಿತಾ ಮನೆ ನಿರ್ಮಿಸಿಕೊಂಡಿದ್ದರು. ಮುಂದಿನ ತಿಂಗಳು ಗೃಹ ಪ್ರವೇಶಕ್ಕೆ ತಯಾರಿ ಕೂಡ ಮಾಡಿಕೊಂಡಿದ್ದರು. ಗೃಹಪ್ರವೇಶದ ನಂತರ ತನ್ನೂರಲ್ಲಿಯೇ ನರ್ಸ್ ವೃತ್ತಿ ಮುಂದುವರೆಸುವ ಚಿಂತನೆಯಲ್ಲಿ ರಂಜಿತಾ ಇದ್ದರು. ಆದರೆ, ವಿಧಿಯಾಟಕ್ಕೆ ರಂಜಿತಾ ಬಲಿಯಾಗಿದ್ದಾರೆ.