ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಳಿಕ ಭಾರತದ ಮೇಲೆ ಅಣ್ವಸ್ತ್ರ ಬೆದರಿಕೆಯೊಡ್ಡಿದ್ದ ಪಾಕಿಸ್ತಾನದ ವಿರುದ್ಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೆಂಡಕಾರಿದ್ದಾರೆ. ಒಂದು ಬೇಜವಾಬ್ದಾರಿಯುತ ಮತ್ತು ನಿರ್ಲಕ್ಷ್ಯಯುತ ರಾಷ್ಟ್ರದ ಕೈಯ್ಯಲ್ಲಿ ಪರಮಾಣು ಬಾಂಬುಗಳು ಸುರಕ್ಷಿತವೇ ಎಂದು ಅಂತಾರಾಷ್ಟ್ರೀಯ ಸಮುದಾಯವನ್ನು ರಾಜನಾಥ್ ಪ್ರಶ್ನಿಸಿದ್ದಾರೆ.
ಅಲ್ಲದೆ, ಪರಮಾಣು ಶಸ್ತ್ರಾಸ್ತ್ರಗಳ ಶಾಂತಿಯುತ ಬಳಕೆ ಮತ್ತು ಸೇನಾ ಉದ್ದೇಶಗಳಿಗಾಗಿ ಅವುಗಳ ಬಳಕೆ ನಿಯಂತ್ರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಅಂತಾರಾಷ್ಟ್ರೀಯ ಪರಮಾಣ ಶಕ್ತಿ ಸಂಸ್ಥೆಯು ಈಗ ಪಾಕಿಸ್ತಾಮದ ಅಣ್ವಸ್ತ್ರಗಳ ಮೇಲ್ವಿಚಾರಣೆ ನಡೆಸಬೇಕು ಎಂದೂ ಸಿಂಗ್ ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆಗೆ ನಾವು ಬಗ್ಗುವುದಿಲ್ಲ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ರಾಜನಾಥ್ ಸಿಂಗ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಮೋದಿಯವರ ಹೇಳಿಕೆಯ ಧ್ವನಿಯಲ್ಲೇ ಗುರುವಾರ ಮಾತನಾಡಿದ ಸಿಂಗ್, ಭಯೋತ್ಪಾದನೆಯ ವಿರುದ್ಧ ಭಾರತದ ಸಂಕಲ್ಪ ಹೇಗಿದೆಯೆನ್ನುವುದಕ್ಕೆ, ಪಾಕಿಸ್ತಾನದ ಅಣ್ವಸ್ತ್ರ ಬ್ಲ್ಯಾಕ್ ಮೇಲ್ಗೆ ನಾವು ಬಗ್ಗದಿರುವುದೇ ಸಾಕ್ಷಿ. ಹಲವು ಬಾರಿ ಪಾಕಿಸ್ತಾನವು ಹೇಗೆ ಜವಾಬ್ದಾರಿ ಮರೆತು ಭಾರತದ ಮೇಲೆ ಪರಮಾಣು ದಾಳಿಯ ಬೆದರಿಕೆಯೊಡ್ಡಿತು ಎನ್ನುವುದನ್ನು ಇಡೀ ಜಗತ್ತೇ ನೋಡಿದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಆಪರೇಷನ್ ಸಿಂದೂರದ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್, ಇದು ಭಯೋತ್ಪಾದನೆಯ ವಿರುದ್ಧ ಭಾರತ ಹಿಂದೆಂದೂ ಕೈಗೊಳ್ಳದಂತಹ ಅತಿದೊಡ್ಡ ಕಾರ್ಯಾಚರಣೆಯಾಗಿದೆ. ಸುಮಾರು 35-40 ವರ್ಷಗಳಿಂದಲೂ ಭಾರತವು ಗಡಿಯಾಚೆಗಿನ ಭಯೋತ್ಪಾದನೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಇಂದು ಭಾರತವು ಉಗ್ರವಾದದ ವಿರುದ್ಧ ಏನು ಮಾಡಲೂ ಹೇಸುವುದಿಲ್ಲ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಪಹಲ್ಗಾಮ್ ದಾಳಿಯಲ್ಲಿ ಉಗ್ರರು ನಮ್ಮ ಪ್ರವಾಸಿಗರ ಹಣೆಗೆ ಗುಂಡು ಹೊಡೆದರು. ಭಾರತವು ಉಗ್ರರ ಎದೆಗೇ ಗುಂಡು ಹೊಡೆಯುವ ಮೂಲಕ ಪ್ರತೀಕಾರ ತೀರಿಸಿತು ಎಂದೂ ರಾಜನಾಥ್ ಸಿಂಗ್ ಹೇಳಿದ್ದಾರೆ.
ಕಾಶ್ಮೀರದ ಚಿನಾರ್ ಕಾರ್ಪ್ಸ್ ಪ್ರಧಾನ ಕಚೇರಿಗೆ ಗುರುವಾರ ಭೇಟಿ ನೀಡಿದ ಅವರು, ಅಲ್ಲಿರುವ ಯೋಧರೊಂದಿಗೆ ಮಾತುಕತೆ ನಡೆಸಿ ಬಳಿಕ ಅವರನ್ನುದ್ದೇಶಿಸಿ ಮಾತನಾಡಿದ್ದಾರೆ. ನಂತರ ಬಾದಾಮಿ ಬಾಘ್ ಕಂಟೋನ್ಮೆಂಟ್ ನಲ್ಲಿ ಯೋಧರ ಜತೆ ಸಂವಾದ ನಡೆಸಿದ್ದಾರೆ. ಈ ವೇಳೆ ಅವರಿಗೆ ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಾಥ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಮೂವರೂ ಯೋಧರೊಂದಿಗೆ ಸೇರಿ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಿದ್ದೂ ಕಂಡುಬಂದಿದೆ.