ಬೆಂಗಳೂರು: ನಗರದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹೀಗಾಗಿ ಎಲ್ಲೆಡೆ ನೀರೋ ನೀರು ಎನ್ನುವಂತಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಸಾಕಷ್ಟು ಮನೆಗಳಿಗೆ ನೀರು ನುಗ್ಗಿ ಜನ ತೊಂದರೆ ಅನುಭವಿಸುವಂತಾಗಿದೆ. ಈಗ ಅನಾಥಾಶ್ರಮಕ್ಕೂ ನೀರು ನುಗ್ಗಿದೆ.
ಕೆಂಗೇರಿಯ ಗುರುಕುಲ ಆಶ್ರಮಕ್ಕೆ ವೃಷಾಭವತಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮಕ್ಕಳು ಮಲಗಿದ್ದ ವೇಳೆ ಭಾರಿ ನೀರು ನುಗ್ಗಿದೆ. ತಕ್ಷಣವೇ ಸ್ಥಳೀಯ ಕಟ್ಟಡಕ್ಕೆ ಮಕ್ಕಳನ್ನು ಸಿಬ್ಬಂದಿ ಸ್ಥಳಾಂತರಿಸಿದ್ದಾರೆ. ಸುಮಾರು 40ಕ್ಕೂ ಅಧಿಕ ಮಕ್ಕಳು ಮಳೆ ನೀರಿನಿಂದ ತೊಂದರೆ ಅನುಭವಿಸಿದ್ದಾರೆ. ಸೊಂಟದ ಮಟ್ಟಕ್ಕೆ ನೀರು ತುಂಬಿಕೊಂಡು, ಅದರಲ್ಲೇ ಮಕ್ಕಳನ್ನು ಸ್ಥಳಾಂತರಿಸಲಾಗಿದೆ.