ಚಿಕ್ಕೋಡಿ: ಕಾಂಗ್ರೆಸ್ ಸರ್ಕಾರ ಬಹಳ ದಿನ ಉಳಿಯಲ್ಲ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿಕೆ ವಿಚಾರವಾಗಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಅಶೋಕ ಭವಿಷ್ಯ ಹೇಳುತ್ತಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಅವರು ಬೇಕಾದರೇ ಯಾವುದಾದರು ಮಠಕ್ಕೆ ಹೋಗಿ ಅಧ್ಯಯನ ಮಾಡಿಕೊಂಡು ಬರಲಿ.
ಬೇಕಾದರೆ ನಾನೇ ಉಚಿತವಾಗಿ ಅವರನ್ನು ಮಠಕ್ಕೆ ಸೇರಿಸುತ್ತೇನೆ. ಮಠದಲ್ಲಿ ಬಂದು ಒಂದು ತಿಂಗಳ ಕಾಲ ಇದ್ದು ಅಲ್ಲಿರುವ ಕಾಲಜ್ಞಾನ ಅಧ್ಯಯನ ಮಾಡಿ ಭವಿಷ್ಯ ಹೇಳಿದರೆ ಒಳ್ಳೆಯದಾಗಬಹುದು ಎಂದು ವ್ಯಂಗ್ಯವಾಡಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್ ಅಶೋಕ ನನ್ನ ಆತ್ಮೀಯ ಗೆಳೆಯ. ಯಾರ ಭವಿಷ್ಯವನ್ನು ಯಾರು ಹೇಳಲು ಆಗುವುದಿಲ್ಲ. ಭವಿಷ್ಯ ಹೇಳುವವನ ಹೆಂಡತಿ ಹಾಸಿಗೆಯಲ್ಲಿ ಸತ್ತರೆ ಅವರಿಗೆ ಗೊತ್ತಿರುವುದಿಲ್ಲ ಎಂಬ ಮಾತಿದೆ. ಅದನ್ನು ಮೊದಲು ಆರ್.ಅಶೋಕ್ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.