ಧಾರವಾಡ : ವಿಪಕ್ಷ ನಾಯಕ ಆರ್. ಅಶೋಕ್ ಅವರು ಈ ಬಾರಿಯ ದಸರಾವನ್ನು ಹೊಸ ಸಿಎಂ ಉದ್ಘಾಟಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದಕ್ಕೆ ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಟಾಂಗ್ ಕೊಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಸಿಎಂ ಆಗುತ್ತಾರೆ ಎಂಬುವುದನ್ನು ಅಶೋಕ್ ಅವರನ್ನೇ ಕೇಳಬೇಕು. ಅವರು ಸದಾ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.
ತುರ್ತು ಪರಿಸ್ಥಿತಿಯ 50 ವರ್ಷದ ಬಗ್ಗೆ ಬಿಜೆಪಿ ಅಭಿಯಾನ ಮಾಡುತ್ತಿರುವ ವಿಷಯವಾಗಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಆಗಿ 50 ವರ್ಷ ಕಳೆದಿವೆ. ಆದರೆ, ಅದಕ್ಕಿಂತ ಕೆಟ್ಟ ಪರಿಸ್ಥಿತಿ ಈಗ ದೇಶದಲ್ಲಿದೆ. ಅದರ ಬಗ್ಗೆ ಬಿಜೆಪಿಯವರು ಚರ್ಚೆ ಮಾಡ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಪಹಲ್ಗಾಮ್, ಪುಲ್ವಾಮಾ ಬಗ್ಗೆ ಯಾಕೆ ಅವರು ಮಾತನಾಡುವುದಿಲ್ಲ? ವಿಷಯಾಧಾರಿತ ಸಮಸ್ಯೆ ಜನರಿಗೆ ಗೊತ್ತಾಗದಂತೆ ಹೊಸ ಹೊಸ ವಿಷಯಗಳನ್ನು ತರಲು ಬಿಜೆಪಿ ಯತ್ನಿಸುತ್ತಿದೆ. ಕೇಂದ್ರದಲ್ಲಿ 11 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ ಜನರಿಗೆ ಇದರ ಬಗ್ಗೆ ಯಾವುದೇ ಮಾಹಿತಿ ಇರಬಾರದು ಎಂಬುವುದು ಅವರ ಉದ್ಧೇಶ. ನಮ್ಮ ದೇಶನೇ ಗ್ರೇಟ್, ನಮ್ಮ ಪ್ರಧಾನಿ ಗ್ರೇಟ್ ಎಂದು ಟಿವಿಯಲ್ಲಿ ಒಡಿಸುವುದೇ ಕೆಲಸವಾಗಿ ಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
50 ವರ್ಷದ ತುರ್ತು ಬಗ್ಗೆ ಅವರು ಮಾತಾಡ್ತಾರೆ. ಅದು ಈಗ ಪ್ರಸ್ತುತ ಇದೆಯಾ?ಎಂದು ಲಾಡ್ ಪ್ರಶ್ನಿಸಿದ್ದಾರೆ. ಈ ಚರ್ಚೆ ಮಾಡುವ ವಿಷಯವಾ ಅದು ಎಂಬುವುದು ನನ್ನ ವಾದ ಎಂದಿದ್ದಾರೆ.