ಆಪರೇಷನ್ ಸಿಂಧೂರ್…ಪಾಕಿಸ್ತಾನ ವಿರುದ್ಧ ಭಾರತದ ಪ್ರತೀಕಾರದ ದೊಡ್ಡ ಅಸ್ತ್ರ. 100ಕ್ಕೂ ಹೆಚ್ಚು ಉಗ್ರರನ್ನು ಸದೆಬಡಿದ ಈ ಕಾರ್ಯಾಚರಣೆ ಪಹಲ್ಗಾಮ್ ನಲ್ಲಿ ಪ್ರಾಣತೆತ್ತವರ ಬಲಿದಾನಕ್ಕೆ ಪ್ರತಿಯಾಗಿ ನಡೆದ ಐತಿಹಾಸಿಕ ಆಪರೇಷನ್ ಸಿಂಧೂರದ ಹೆಸರಿನಲ್ಲಿ ಸಮರ ಸಾರಿದ್ದ ಭಾರತ ಅದರ ಮುಂದಾಳತ್ವನ್ನೂ ಮಹಿಳೆಯರ ಹೆಗಲಿಗೇ ಏರಿಸಿದ್ದು ಅಪರೂಪದಲ್ಲೇ ಅಪರೂಪ.

ಭಾರತೀಯ ಸೇನೆಯ ಲೆಪ್ಟಿನೆಂಟ್ ಸೋಫಿಯಾ ಖುರೇಶಿ ಇವತ್ತು ನಿಜಕ್ಕೂ ದೇಶದ ಮನೆ ಮಗಳಾಗಿದ್ದಾರೆ. 1974ರಲ್ಲಿ ಜನಿಸಿದ ಸೋಫಿಯಾ, ಮೂಲತ ಗುಜರಾತ್ ನ ವಡೋದರದವರು. ಇಲ್ಲಿನ ಕೇಂದ್ರೀಯ ವಿದ್ಯಾಲಯದಲ್ಲಿ ಓದಿದ್ದ ಸೋಫಿಯಾ ಮುಂದೆ ಮಹಾರಾಜ ಸಯ್ಯಾಜಿ ರಾವ್ ಕಾಲೇಜಿನಲ್ಲಿ ತಮ್ಮ ಬಯೋಕೆಮಿಸ್ಟ್ರಿ ಪದವಿ ಪೂರ್ಣಗೊಳಿಸಿದ್ದರು. ನಂತರ ಕನಸಿನಂತೆ ಪಿಹೆಚ್ ಡಿ ಮಾಡಲು ಮುಂದಾದರು. ಭಾರತೀಯ ಸೇನೆ ಅವರನ್ನು ಕೈಬೀಸಿ ಕರೆಯುತ್ತಿದ್ದಂತೆ ಅರ್ಧಕ್ಕೆ ಬಿಟ್ಟು ಸೇನೆ ಸೇರ್ಪಡೆಯಾದರು. ಸೋಫಿಯಾವರಿಗೆ ಮೂವರು ಸಹೋದರರಿದ್ದಾರೆ.
ಸೋಫಿಯಾರ ತಾತ ಕೂಡಾ ಭಾರತೀಯ ಸೇನೆಯಲ್ಲಿದ್ದು, ಧರ್ಮ ಬೋಧಕರಾಗಿದ್ದರು. ಭಾರತದ ಮೊದಲ ಮಹಿಳಾ ತುಕಡಿ ಫೋರ್ಸ್ 18ನನ್ನು ಮುನ್ನಡೆಸಿದ ಕೀರ್ತಿ ಕೂಡ ಇವರದ್ದೇ. 2001ರಲ್ಲಿ ನಡೆದ ಸಂಸತ್ ಭವನ ದಾಳಿಗೆ ಪ್ರತೀಕಾರವಾಗಿ ನಡೆದ ಆಪರೇಷನ್ ಪರಾಕ್ರಮ್ ನಲ್ಲೂ ಸೋಫಿಯಾ ಖುರೇಷಿ ಪ್ರಮುಖ ಪಾತ್ರ ನಿಭಾಯಿಸಿದ್ದರು.
ಸೇವೆಯಲ್ಲಿದ್ದಾಗಲೇ ಪ್ರೀತಿಯ ಕಡಲಲ್ಲಿ ತೇಲಿದ ಖುರೇಷಿ, ಕರ್ನಾಟಕದ ಗೋಕಕದ ಕಣ್ಣೂರು ಮೂಲದ ತಾಜುದ್ದೀನ್ ಖುರೇಷಿಯವರ ಪ್ರೇಮದ ಬಾಹುಗಳಿಗೆ ಜಾರಿದ್ದರು. ಮುಂದೆ 2005ರಲ್ಲಿ ಸೋಫಿಯಾ ಮತ್ತು ತಾಜುದ್ದೀನಿ ಇಬ್ಬರೂ ಸಪ್ತಪದಿ ತುಳಿದು ವಿವಾಹ ಬಂಧನದಲ್ಲಿ ಬಂಧಿಯಾಗಿದ್ದರು. ಸದ್ಯ ತಾಜ್ ಖುರೀಶಿ ಕೂಡಾ ಕರ್ನಲ್ ಆಗಿ ಝಾನ್ಸಿಯಲ್ಲಿ ಸೇವೆಯಲ್ಲಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, 18 ವರ್ಷದ ಹಿರಿ ಮಗನ ಹೆಸರು ಸಮೀರ್. ಇನ್ನು ತಾಯಿಯಂತೆ ಸೇನೆಗೆ ಸೇರುವ ಹೆಬ್ಬಯಕೆಯಲ್ಲಿರುವ ಪುತ್ರಿ ಹನಿಮಾ ಅಮ್ಮನ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸ್ತಿದ್ದಾರೆ. ಅಷ್ಟೇ ಅಲ್ಲಾ ಸೋಫಿಯಾ ಖುರೇಶಿ ತಂದೆ ತಾಜ್ ಮೊಹಮ್ಮದ್ ಖುರೇಶ್ ಮತ್ತು ಚಿಕ್ಕಪ್ಪಂದಿರಾದ ಇಸ್ಮಾಯಿಲ್ ಮತ್ತು ವಲಿ ಕೂಡಾ ಬಿಎಸ್ ಎಫ್ ನಲ್ಲಿ ಸುಬೇದಾರ್ ಗಳಾಗಿದ್ದರು.