ಬೆಂಗಳೂರಿನ ಆರ್ ವಿ ಲರ್ನಿಂಗ್ ಹಬ್ ಎಂಬ ಕಾಲೇಜಿನಲ್ಲಿ ಕನ್ನಡ ಮಾತನಾಡಿದ್ದಕ್ಕೆ ಪ್ರಾಧ್ಯಾಪಾಕರೊಬ್ಬರನ್ನು ಅಮಾನತು ಮಾಡಿರುವ ಆರೋಪ ಕೇಳಿ ಬಂದಿದೆ. ಈ ಆರೋಪ ಕೇಳಿ ಕನ್ನಡಿಗರು ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಕನ್ನಡ ಮಾತನಾಡಿ ಕಾಲೇಜಿನಿಂದಲೇ ಹೊರ ಬಿದ್ದ ಪ್ರಾಧ್ಯಾಪಕರೇ ಈ ಕುರಿತು ವಿಡಿಯೋ ಮಾಡಿದ್ದಾರೆ. ದೇವರಾಜ್ ಎಸ್.ಗೌಡ ಎಂಬುವವರು ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು, ತಾವೊಬ್ಬ ಪ್ರಾಧ್ಯಾಪಕರು ಎಂದು ಹೇಳಿಕೊಂಡಿದ್ದಾರೆ. ನಾನು ಆರ್ ವಿ ಲರ್ನಿಂಗ್ ಹಬ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದೆ. ಪಾಠ ಮಾಡುತ್ತಿದ್ದ ವೇಳೆ ಕನ್ನಡದಲ್ಲಿ ಮಾತನಾಡಿದೆ. ಆ ವೇಳೆ ವಿದ್ಯಾರ್ಥಿಯೊಬ್ಬರು ಕನ್ನಡದಲ್ಲಿ ಮಾತನಾಡದಂತೆ ಹೇಳಿದರು. ಆಗ ನಾನು ಪ್ರಶ್ನಿಸಿದೆ. ವಿದ್ಯಾರ್ಥಿ ನನ್ನೊಂದಿಗೆ ವಾಗ್ವಾದ ನಡೆಸಿದರು. ನಿನಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದಾದರೆ, ನಾನು ಮಾತನಾಡಿದ್ದರು ಹೇಗೆ ಅರ್ಥ ಆಯ್ತು ಅಂತಾ ಪ್ರಶ್ನಿಸಿದೆ. ಆಗ ವಿದ್ಯಾರ್ಥಿ ನನಗೆ ಅದೆಲ್ಲ ಗೊತ್ತಿಲ್ಲ. ನನಗೆ ಇಂಗ್ಲಿಷ್ ನಲ್ಲೇ ಮಾತನಾಡಬೇಕು ಎಂದು ಒತ್ತಾಯಿಸಿತು.
ಮಾರನೇ ದಿನ ಕಾಲೇಜಿನ ಆಡಳಿತ ಮಂಡಳಿ ನನಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿತು. ಕೊಡದಿದ್ದರೆ, ನಿಮ್ಮ ಮಗು ಇದೇ ಕಾಲೇಜಿನಲ್ಲಿ ಓದುತ್ತಿದ್ದು, ಅವರ ಯಾವುದೇ ಡಾಕ್ಯುಮೆಂಟ್ ಕೊಡುವುದಿಲ್ಲ ಎಂದು ಹೆದರಿಸಿ, ರಾಜೀನಾಮೆ ಪಡೆದರು. ಆದರೆ, ಈಗ ನನಗೆ ನಿದ್ದೆ ಬರುತ್ತಿಲ್ಲ. ಕನ್ನಡ ನಾಡಿನಲ್ಲಿ ಕನ್ನಡ ಮಾತನಾಡಲು ಭಯ ಪಡಬೇಕಾದ ವಾತಾವರಣ ನಿರ್ಮಾಣವಾಯಿತಲ್ಲ ಎಂಬ ಬೇಜಾರು ನನ್ನನ್ನು ಕಾಡುತ್ತಿದೆ. ಹೀಗಾಗಿ ನನ್ನ ಮಗುವಿನ ಡಾಕ್ಯುಮೆಂಟ್ ಅವರು ನೀಡದಿದ್ದರೂ ಪರವಾಗಿಲ್ಲ. ಕನ್ನಡ ಉಳಿಯಬೇಕು. ಇದನ್ನು ಪ್ರತಿಯೊಬ್ಬರು ಖಂಡಿಸಬೇಕು. ಕರ್ನಾಟಕದಲ್ಲಿ ಇಂತಹ ಪರಿಸ್ಥಿತಿ ಯಾವತ್ತೂ ನಿರ್ಮಾಣವಾಗಬಾರದು ಎಂದು ಮನವಿ ಮಾಡಿದ್ದಾರೆ.
https://www.instagram.com/reel/DK4IQzTyab/