ಬೆಂಗಳೂರು: ಮರದ ಕೊಂಬೆ ಬಿದ್ದು 29 ವರ್ಷದ ಅಕ್ಷಯ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಅಕ್ಷಯ್ ಕುಟುಂಬಸ್ಥರಿಗೆ ಬಿಬಿಎಂಪಿ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇತ್ತೀಚೆಗಷ್ಟೇ ಮರದ ಕೊಂಬೆ ಬಿದ್ದ ಪರಿಣಾಮ ಅಕ್ಷಯ್ ಎಂಬ ವ್ಯಕ್ತಿ ಸಾವು- ಬದುಕಿನ ಮಧ್ಯೆ ಹೋರಾಟ ನಡೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಅಂದು ಆಸ್ಪತ್ರೆಯ ಸಂಪೂರ್ಣ ಖರ್ಚನ್ನು ನೋಡಿಕೊಳ್ಳುವುದಾಗಿ ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರು. ಆದರೆ, ಈಗ ಆಸ್ಪತ್ರೆ ಬಿಲ್ ನೀಡದೆ ಸತಾಯಿಸುತ್ತಿದ್ದಾರೆ. ಈ ಕುರಿತು ದೂರು ನೀಡಿದರೆ ಹಿಂಪಡೆಯುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಅಕ್ಷಯ್ ಸಹೋದರ ಬೆನಕರಾಜ್ ಆರೋಪಿಸಿದ್ದಾರೆ.
ಘಟನೆ ನಡೆದ ವೇಳೆ ಬಿಬಿಎಂಪಿ ಅಧಿಕಾರಿಗಳು ಆಸ್ಪತ್ರೆ ಖರ್ಚು ನೋಡಿಕೊಳ್ಳುವುದಾಗಿ ಹೇಳಿದ್ದರು. ಖುದ್ದು ಅಂದಿನ ಬಿಬಿಎಂಪಿಯ ಅರಣ್ಯ ಇಲಾಖೆಯ ಉಪಸಂರಕ್ಷಣಾಧಿಕಾರಿ ಬಿ.ಎಲ್.ಜಿ ಸ್ವಾಮಿ ಈ ಕುರಿತು ಭರವಸೆ ನೀಡಿದ್ದರು. ಆದರೆ, ಈಗ ಅಕ್ಷಯ್ ಸಾವನ್ನಪ್ಪಿದ್ದು, ಆಸ್ಪತ್ರೆ ಬಿಲ್ ಭರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬೆನಕರಾಜ್ ಆರೋಪಿಸಿದ್ದಾರೆ.
ಅಕ್ಷಯ್ ರನ್ನು ಉಳಿಸಿಕೊಳ್ಳುವುದಕ್ಕಾಗಿ ಕುಟುಂಬಸ್ಥರು 1,68,451 ರೂ. ಖರ್ಚು ಮಾಡಿದ್ದಾರೆ. ಸಾಲ ಮಾಡಿ ಅಷ್ಟೊಂದು ಹಣ ಉಳಿಸಿದ್ದಾರೆ. ಆದರೆ, ಈಗ ದುಡ್ಡು ನೀಡಲು ಬಿಬಿಎಂಪಿ ಹಿಂದೇಟು ಹಾಕುತ್ತಿದೆ. ಬದಲಾಗಿ ಆ ದುಡ್ಡಿಗೂ ಬಿಬಿಎಂಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಪತ್ರದಲ್ಲಿ ಬರೆದುಕೊಡುವಂತೆ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಅಕ್ಷಯ್ ಸಾವನ್ನಪ್ಪುತ್ತಿದ್ದಂತೆ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಅಕ್ಷಯ್ ಸಹೋದರ ದೂರು ನೀಡಿದ್ದರು. ದೂರಿನಡಿ ನಾಲ್ವರ ವಿರುದ್ಧ ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. A1 -RFO, A2 -ACF, A3-DFO, A4 BBMP ವಿರುದ್ಧ ದೂರು ದಾಖಲಾಗಿದ್ದು. ಆದರೆ, ಈಗ ಆ ದೂರನ್ನು ಹಿಂಪಡೆಯುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಅಕ್ಷಯ್ ಸಹೋದರ ಆರೋಪಿಸಿದ್ದಾರೆ.