ಚೆನ್ನೈ: ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ರಾಜಕೀಯ ರಂಗು ಆವರಿಸತೊಡಗಿದೆ. ಮುಂದಿನ ವರ್ಷ ತಮಿಳು ನೆಲದಲ್ಲಿ ರಾಜಕೀಯ ಜಿದ್ದಾಜಿದ್ದಿ ನಡೆಯಲಿದೆ. ಇದರ ನಡುವೆಯೇ ಹಲವು ನಾಟಕೀಯ ಬೆಳವಣಿಗೆಗಳು ಶುರುವಾಗಿದೆ.
ಅದರಲ್ಲೂ ಪಟ್ಟಾಲಿ ಮಕ್ಕಳ್ ಕಟ್ಟಿ ಪಾರ್ಟಿಯಲ್ಲಿ ಖುದ್ದು ತಂದೆಯೇ ಮಗನನ್ನ ಪಕ್ಷದ ಅಧ್ಯಕ್ಷ ಹುದ್ದೆಯಿಂದ ಕಿತ್ತು ಹಾಕಿರುವುದು ಹಲವು ಅಚ್ಚರಿಗಳನ್ನು ಮೂಡಿಸಿದೆ. ಅದರಲ್ಲೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಚೆನ್ನೈ ಭೇಟಿಗೂ ಮುನ್ನ ನಡೆದ ಈ ಬೆಳವಣಿಗೆ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.
ಪಿಎಂಕೆ ಅಧ್ಯಕ್ಷಗಿರಿಯಿಂದ ಕೇಂದ್ರದ ಮಾಜಿ ಸಚಿವ ಅನ್ಬುಮಣಿಯನ್ನು ಸ್ವಂತ ತಂದೆ ರಾಮದಾಸ್ ಅವರೇ ಕೆಳಗಿಳಿಸಿದ್ದಾರೆ. ಅಷ್ಟೇ ಅಲ್ಲಾ ತಾವೇ ಪಕ್ಷಾಧ್ಯಕ್ಷ ಹುದ್ದೆ ಅಲಂಕರಿಸಿದ್ದಾರೆ. ಹಾಗೆ ನೋಡಿದರೆ ಅನ್ಬುಮಣಿ ಬಿಜೆಪಿ ಜೊತೆ ಮೈತ್ರಿಗೆ ತುದಿಗಾಲಲ್ಲಿ ನಿಂತಿದ್ದರು. ಆದರೆ, ಕಳೆದ ಲೋಕಸಭಾ ಚನಾವಣೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯಿಂದ ಪಿಎಂಕೆ ಸ್ಪರ್ಧಿಸಿದ್ದ 10 ಸ್ಥಾನಗಳಲ್ಲಿ ಹೀನಾಯವಾಗಿ ಸೋತಿತ್ತು. ಇದರಿಂದ ಎಚ್ಚೆತ್ತಿರುವ ರಾಮದಾಸ್ ಇದೀಗ ಮಗನನ್ನೇ ಕಿತ್ತೆಸೆದು ಪಕ್ಷ ಕೇವಲ ದ್ರಾವಿಡ ಪಕ್ಷಗಳೊಂದಿಗೆ ಮಾತ್ರ ಮೈತ್ರಿಗೆ ಸಿದ್ಧ ಅಂತಾ ಘೋಷಿಸಿದ್ದಾರೆ.
ಹೀಗಾಗಿ ಪಕ್ಷವೇ ಈಗ ಇಬ್ಭಾಗವಾಗುತ್ತಾ ಎಂಬ ಪ್ರಶ್ನೆ ಮೂಡುತ್ತಿದೆ. ತಂದೆ-ಮಗನ ಜಗಳದ ಹೆಸರಲ್ಲಿ ವಣಿಯಾರ್ ಸಮುದಾಯದ ಶ್ರೇಯೋಭಿವೃದ್ಧಿಯ ಪಕ್ಷವೊಂದು ಈಗ ಕವಲುದಾರಿಗೆ ಬಂದು ನಿಂತಿರುವುದು ವಿಪರ್ಯಾಸವೇ ಸರಿ.