ಮೈಸೂರು: ನಗರದಲ್ಲಿ ಪೊಲೀಸರಿಂದ ಪ್ರಾಪರ್ಟಿ ರಿಟರ್ನ್ ಪರೇಡ್ ನಡೆಯಿತು.
ನಗರದ ವಿವಿಧ ಪೋಲಿಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಭೇದಿಸಿದ್ದ ಪೊಲೀಸರು, ಖದೀಮರಿಂದ ವಶಕ್ಕೆ ಪಡೆದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸಿಸುವ ಕಾರ್ಯಕ್ರಮ ಆಯೋಜನೆ ಮಾಡಿದ್ದರು.
ಈ ವೇಳೆ ಪೊಲೀಸರು, ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಮರಳಿಸಿದ್ದಾರೆ. ಕಳೆದ 8 ತಿಂಗಳ ಅವಧಿಯಲ್ಲಿ ನಡೆದಿದ್ದ ಕಳ್ಳತನದ ಪ್ರಾಪರ್ಟಿಗಳನ್ನು ಮರಳಿ ನೀಡಿದ್ದಾರೆ. 2 ದರೋಡೆ, ಸುಲಿಗೆ 4, ಸರಗಳ್ಳತನ ಪ್ರಕರಣ 21, ಕಳ್ಳತನ 34, ಮನೆಗಳ್ಳತನ 6, ವಾಹನ ಕಳುವು 69 ಪ್ರಕರಣಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಪೈಕಿ 20 ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಒಟ್ಟು 4,23,60,000 ರೂ. ಮೌಲ್ಯದ 5 ಕೆಜಿ 320 ಗ್ರಾಂ ಚಿನ್ನಾಭರಣವನ್ನು ಹಸ್ತಾಂತರಿಸಿದ್ದಾರೆ. ಅಲ್ಲದೇ, 6 ಕೆಜಿ 246 ಗ್ರಾಂ ಬೆಳ್ಳಿ ಪದಾರ್ಥಗಳು, 52 ದ್ವಿ ಚಕ್ರವಾಹನಗಳು, 9 ಕಾರುಗಳು, 8 ಗೂಡ್ಸ್ ವಾಹನಗಳು ಸೇರಿದಂತೆ 13,54,500 ರೂ ನಗದು ಹಸ್ತಾಂತರಿಸಿದ್ದಾರೆ. ದಸ್ತಗಿರಿ ಮಾಡಿರುವ 20 ಕಳ್ಳರಲ್ಲಿ ಇಬ್ಬರು ಅಂತರ್ ರಾಜ್ಯ ಕಳ್ಳರು ಎನ್ನಲಾಗಿದೆ.
ಈ ಕುರಿತು ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಚಿನ್ನಾಭರಣ ಕಳೆದುಕೊಂಡಿದ್ದ ಚಿನ್ನಾಭರಣ, ಹಣ ವಾಪಸ್ ಪಡೆಯುತ್ತಿದ್ದಂತೆ ವಾರಸುದಾರರು ಖುಷಿ ಪಟ್ಟಿದ್ದಾರೆ.