ಸಾಮಾಜಿಕ ಜಾಲತಾಣದಲ್ಲಿ ಪ್ರತೀಕಾರದ ಪೋಸ್ಟ್ ಗಳ ವಿರುದ್ದ ಮಂಗಳೂರು ಪೊಲೀಸರು ಸಮರ ಸಾರಿದ್ದಾರೆ.

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಲಾಗಿದೆ. ಈ ಹತ್ಯೆ ಬೆನ್ನಲ್ಲೇ ಮಂಗಳೂರು ಪೊಲೀಸರು ಅಲರ್ಟ್ ಆಗಿದ್ದು, ಪ್ರತೀಕಾರದ ಸಂದೇಶವುಳ್ಳ ಪೋಸ್ಟ್ ಮಾಡಿದವರ ವಿರುದ್ಧ ಸಮರ ಸಾರಿದ್ದಾರೆ.

ಪ್ರತೀಕಾರದ ಸಂದೇಶ ಪೋಸ್ಟ್ ಸಂಬಂಧ ಮುಲ್ಕಿ, ಉರ್ವಾ, ಬರ್ಕೆ, ಉತ್ತರ, ದಕ್ಷಿಣ, ಮೂಡಬಿದಿರೆ, ಕಾವೂರು ಠಾಣೆಯಲ್ಲಿ 12 ಪ್ರಕರಣ ದಾಖಲಾಗಿವೆ. ಹಲವು ಇನ್ಸ್ಟಾಗ್ರಾಂ ಪೇಜ್, ಫೇಸ್ಬುಕ್ ಪೋಸ್ಟ್ ಹಾಗೂ ವಾಟ್ಸಪ್ ಮೆಸೇಜ್ ಗಳ ವಿರುದ್ದ ಎಫ್ಐಆರ್ ದಾಖಲಾಗಿದೆ. beary_royal_nawab ಎಂಬ ಇನ್ಸ್ಟಾಗ್ರಾಮ್ಖಾತೆಯಲ್ಲಿ “ಶತ್ರುಸಂಹಾರಶರುವಾಗಿದೆ, ಪ್ರತಿರೋಧ ಅಪರಾಧವಲ್ಲ” ಎಂಬುದಾಗಿ ಪೋಸ್ಟ್ ಮಾಡಿದ್ದರೆ, ಮತ್ತೊಂದು ಕಡೆ ಸುಹಾಸ್ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ಬಲವನ್ನು ಈಗ ತೋರಿಸದೇ ಇದ್ದಲ್ಲಿ ಮುಂದೊಂದು ದಿನ ನಾವೇ ಇರುವುದಿಲ್ಲ ಎಂದು ಪೋಸ್ಟ್ ಮಾಡಲಾಗಿದೆ.
hindu_mantra_ ಎಂಬ ಇನ್ಸ್ಟಾಗ್ರಾಮ್ನಲ್ಲಿ “ನಮಗೆ ಯಾವುದೇ ಉತ್ತರಗಳು ಬೇಡ. ರಕ್ತಕ್ಕೆ ರಕ್ತವೇ ಉತ್ತರವಾಗಬೇಕು ಜೀವಕ್ಕೆ, ಜೀವನೇ ಬೇಕು” ಎಂಬುವುದಾಗಿ ಸ್ಟೋರಿ ಹಾಕಲಾಗಿದೆ. ಜೊತೆಗೆ ullaltho_makka ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ‘ಪ್ರತಿರೋಧ ಅಪರಾಧವಲ್ಲ..” ಎಂಬ ಪೋಸ್ಟ್ ಮಾಡಲಾಗಿದೆ. ಈ ಎಲ್ಲ ಪೋಸ್ಟ್ ಗಳು ಹತ್ಯೆ, ಸಮರ್ಥನೆ ಹಾಗೂ ಪ್ರತೀಕಾರದ ಪೋಸ್ಟ್ ಗಳಾಗಿದ್ದು, ಇವುಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.