ಹೈದರಾಬಾದ್: ನಟ ಹಾಗೂ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ತಮ್ಮ ಪುತ್ರನನ್ನು ಹೆಗಲಲ್ಲಿ ಮಲಗಿಸಿಕೊಂಡು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ತಲುಪಿದ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral Video) ಆಗಿದೆ. ಸಿಂಗಾಪುರದಲ್ಲಿ ಪವನ್ ಕಲ್ಯಾಣ್ ಅವರ ಪುತ್ರ ಮಾರ್ಕ್ ಶಂಕರ್ ಕಲಿಯುತ್ತಿದ್ದ ಶಾಲಾ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿ, ಮಾರ್ಕ್ ಗಾಯಗೊಂಡ ಘಟನೆ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಡಿಸಿಎಂ ಪವನ್ ಕಲ್ಯಾಣ್ ಅವರು ಸಿಂಗಾಪುರಕ್ಕೆ ಧಾವಿಸಿದ್ದರು. ಇದೀಗ ಮಗ ಮಾರ್ಕ್ನನ್ನು ಸಿಂಗಾಪುರದಿಂದ ಆಂಧ್ರಕ್ಕೆ ಮರಳಿ ಕರೆತಂದಿದ್ದಾರೆ. ಮಾರ್ಕ್ ಶಂಕರ್ನನ್ನು ಎದೆಗವಚಿಕೊಂಡು ಹೈದರಾಬಾದ್ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವ ಪವನ್ ಕಲ್ಯಾಣ್ ಅವರ ಫೋಟೋ, ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡತೊಡಗಿವೆ. ಅವರೊಂದಿಗೆ ಅವರ ಪತ್ನಿ ಅನ್ನಾ ಲೆಜ್ನೇವಾ, ಪುತ್ರಿ ಪೊಲೇನಾ ಅಂಜನಾ ಪವನೋವಾ ಕೂಡ ಇದ್ದಾರೆ. ಪವನ್ ಅವರ ಸರಳ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ಮುಖದಲ್ಲಿ ನಿರಾಳ ಭಾವ ಎದ್ದು ಕಾಣುತ್ತಿತ್ತು.
ಸಿಂಗಾಪುರದ ರಿವರ್ ವ್ಯಾಲಿ ಪ್ರದೇಶದ ಶಾಲಾ ಕಟ್ಟಡದಲ್ಲಿ ಇತ್ತೀಚೆಗೆ ಬೆಂಕಿ ಅವಘಡ ಸಂಭವಿಸಿತ್ತು. ಎರಡು ಮತ್ತು ಮೂರನೇ ಮಹಡಿಯಲ್ಲಿ ಬೆಂಕಿ ಆವರಿಸಿಕೊಂಡಿತ್ತು. ಶಾಲೆಯ ತರಗತಿಯೊಳಗೆ ಹೊಗೆ ತುಂಬಿಕೊಂಡಿದ್ದು, ಬೆದರಿದ್ದ ವಿದ್ಯಾರ್ಥಿಗಳು, ಶಿಕ್ಷಕರು ಜೋರಾಗಿ ಕಿರುಚುತ್ತಿದ್ದ ವಿಡಿಯೋ ಕೂಡ ಬಹಿರಂಗವಾಗಿತ್ತು. ಅಗ್ನಿಶಾಮಕ ಸಿಬ್ಬಂದಿಯು ಒಳಹೊಕ್ಕು ಒಳಗಿದ್ದವರನ್ನು ರಕ್ಷಿಸಿದ್ದರು. ಆದರೆ, ಅಷ್ಟರಲ್ಲಾಗಲೇ 10 ವರ್ಷದ ಒಂದು ಹೆಣ್ಣು ಮಗು ಸಾವನ್ನಪ್ಪಿತ್ತು. 19 ಮಕ್ಕಳು ಗಾಯಗೊಂಡಿದ್ದರು. ಗಾಯಗೊಂಡವರ ಪೈಕಿ ಪವನ್ ಕಲ್ಯಾಣ್ ಅವರ ಪುತ್ರ ಮಾರ್ಕ್ ಶಂಕರ್ ಕೂಡ ಒಬ್ಬ. ಪವನ್ ಮತ್ತು ಅನ್ನಾ ಲೆಜ್ನೇವಾ ಅವರ ಕಿರಿಯ ಪುತ್ರನಾದ ಮಾರ್ಕ್ ಶಂಕರ್ನ ಕೈ ಹಾಗೂ ಕಾಲುಗಳಿಗೆ ಸುಟ್ಟಗಾಯಗಳಾಗಿದ್ದವು. ಅಲ್ಲದೇ ಹೊಗೆಯನ್ನು ಸೇವಿಸಿದ ಕಾರಣ ಶ್ವಾಸಕೋಶಕ್ಕೂ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮಾರ್ಕ್ ನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆಯೇ ಆತನನ್ನು ಪವನ್ ಕಲ್ಯಾಣ್ ಸ್ವದೇಶಕ್ಕೆ ಕರೆತಂದಿದ್ದಾರೆ.
ಅನ್ನಾ ಲೆಜ್ನೇವಾ ಅವರು ಪವನ್ ಕಲ್ಯಾಣ್ ಅವರ 3ನೇ ಪತ್ನಿಯಾಗಿದ್ದು ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅವರೇ ಪುತ್ರ ಮಾರ್ಕ್ ಶಂಕರ್ ಮತ್ತು ಪುತ್ರಿ ಪೊಲೆನಾ ಅಂಜನಾ ಪವನೋವಾ.