ನವದೆಹಲಿ: ಪಹಲ್ಗಾಮ್ ದಾಳಿ(Pahalgam Attack) ಬಳಿಕ ಭಾರತದ ದಾಳಿ ಭೀತಿಯಿಂದ ಮೈಪರಚಿಕೊಳ್ಳುತ್ತಿರುವ ಪಾಕಿಸ್ತಾನ, ಈಗ ಭಾರತಕ್ಕೆ ಪರಮಾಣ ದಾಳಿಯ ಬೆದರಿಕೆ ಹಾಕಿದೆ. ಭಾರತವೇನಾದರೂ ನಮ್ಮ ಮೇಲೆ ದಾಳಿ ಮಾಡಿದರೆ ಅಥವಾ ಪಾಕಿಸ್ತಾನಕ್ಕೆ ಬರಬೇಕಿರುವ ನೀರು ಸರಬರಾಜಿಗೆ ಅಡ್ಡಿಪಡಿಸಿದರೆ ನಾವು ಪರಮಾಣು ಶಸ್ತ್ರಾಸ್ತ್ರಗಳು ಸೇರಿದಂತೆ ನಮ್ಮ ಸಂಪೂರ್ಣ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಬಳಸಬೇಕಾಗುತ್ತದೆ ಎಂದು ರಷ್ಯಾದಲ್ಲಿನ ಪಾಕಿಸ್ತಾನದ ರಾಯಭಾರಿ ಎಚ್ಚರಿಸಿದ್ದಾರೆ.
ರಷ್ಯಾದ ಸುದ್ದಿಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಾಸ್ಕೋದಲ್ಲಿನ ಪಾಕಿಸ್ತಾನದ ಉನ್ನತ ರಾಜತಾಂತ್ರಿಕ ಅಧಿಕಾರಿ ಮುಹಮ್ಮದ್ ಖಾಲಿದ್ ಜಮಾಲಿ, ಭಾರತವು ಪಾಕಿಸ್ತಾನದ ಭೂಪ್ರದೇಶದ ಮೇಲೆ ಮಿಲಿಟರಿ ದಾಳಿ ನಡೆಸಲು ಯೋಜಿಸುತ್ತಿದೆ. ವಿಶ್ವಾಸಾರ್ಹ ಗುಪ್ತಚರ ಮೂಲಗಳಿಂದ ನಮಗೆ ಈ ಮಾಹಿತಿ ಸಿಕ್ಕಿದೆ ಹೇಳಿದ್ದಾರೆ. “ಪಾಕಿಸ್ತಾನದ ಕೆಲವು ಪ್ರದೇಶಗಳ ಮೇಲೆ ಭಾರತ ದಾಳಿ ನಡೆಸಲು ನಿರ್ಧರಿಸಿರುವ ಕೆಲವು ದಾಖಲೆಗಳೂ ಸೋರಿಕೆಯಾಗಿವೆ” ಎಂದು ಜಮಾಲಿ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಭಾರತ ನಮ್ಮ ಮೇಲೆ ದಾಳಿ ನಡೆಸಲಿದೆ ಮತ್ತು ಆ ದಿನ ಸನ್ನಿಹಿತವಾಗಿದೆ ಎಂದು ನಮಗೆ ಅನಿಸುತ್ತದೆ” ಎಂದಿದ್ದಾರೆ.
ಭಾರತವೇನಾದರೂ ದಾಳಿ ನಡೆಸಿದರೆ ಪಾಕಿಸ್ತಾನದಲ್ಲಿ ನಾವು ಸಾಂಪ್ರದಾಯಿಕ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬೇಕಾಗುತ್ತದೆ ಎಂದೂ ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದ ಹಿರಿಯ ಅಧಿಕಾರಿಯೊಬ್ಬರು ಭಾರತದ ವಿರುದ್ಧ ಮಾಡಿದ ಪರಮಾಣು ಪ್ರತೀಕಾರದ ಅತ್ಯಂತ ಸ್ಪಷ್ಟ ಬೆದರಿಕೆಗಳಲ್ಲಿ ಇದೂ ಒಂದಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಸೃಷ್ಟಿಯಾಗಿರುವಂತೆಯೇ ಜಮಾಲಿ ಈ ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯು ಎರಡು ಪರಮಾಣು ಸಶಸ್ತ್ರ ನೆರೆಹೊರೆಯವರ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ.
ಇದೇ ವೇಳೆ ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿರುವುದು ಯುದ್ಧದ ಕೃತ್ಯ ಎಂದೂ ಜಮಾಲಿ ಬಣ್ಣಿಸಿದ್ದಾರೆ. “ನದಿಯ ಕೆಳಭಾಗದ ನೀರನ್ನು ಕಸಿದುಕೊಳ್ಳುವ ಅಥವಾ ಅದನ್ನು ತಡೆಯುವ ಅಥವಾ ಬೇರೆಡೆಗೆ ತಿರುಗಿಸುವ ಯಾವುದೇ ಪ್ರಯತ್ನವು ಪಾಕಿಸ್ತಾನದ ವಿರುದ್ಧದ ಯುದ್ಧದ ಕೃತ್ಯವಾಗಿರುತ್ತದೆ. ಅದಕ್ಕೆ ಪೂರ್ಣ ಪ್ರಮಾಣದ ಅಧಿಕಾರ ಸೇರಿದಂತೆ ಸಂಪೂರ್ಣ ಶಕ್ತಿಯಿಂದ ಪ್ರತಿಕ್ರಿಯಿಸಲಾಗುವುದು” ಎಂದು ಅವರು ಹೇಳಿದ್ದಾರೆ.
ಸಿಂಧೂ ನದಿ ಒಪ್ಪಂದವನ್ನು ಉಲ್ಲಂಘಿಸಿ ಭಾರತವೇನಾದರೂ ಜಲಾಶಯ ನಿರ್ಮಿಸಿದರೆ ಪಾಕಿಸ್ತಾನವು ಅದರ ಮೇಲೆ ದಾಳಿ ನಡೆಸಿ, ಒಡೆದು ಹಾಕಲಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಶುಕ್ರವಾರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಜಮಾಲಿ ಅಣ್ವಸ್ತ್ರ ದಾಳಿಯ ಬೆದರಿಕೆಯೊಡ್ಡಿದ್ದಾರೆ.