‘
ಇಸ್ಲಾಮಾಬಾದ್: ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ತಮ್ಮ ಸಂಸತ್ತಿನಲ್ಲಿ ವಿಚಿತ್ರ ಹೇಳಿಕೆಯೊಂದನ್ನು ನೀಡಿ ನಗೆಪಾಟಲಿಗೀಡಾಗಿದ್ದಾರೆ. ಪಾಕಿಸ್ತಾನದ “ಸೈಬರ್ ಯೋಧರು” ಭಾರತದ ಐಪಿಎಲ್ ಪಂದ್ಯಾವಳಿಯ ಸಮಯದಲ್ಲಿ ಕ್ರೀಡಾಂಗಣದ ಫ್ಲಡ್ಲೈಟ್ಗಳನ್ನು ಹ್ಯಾಕ್ ಮಾಡಿದ್ದಾರೆ. ಭಾರತದ ಅಣೆಕಟ್ಟುಗಳ ಗೇಟ್ಗಳನ್ನು ತೆರೆದು ನೀರು ಬಿಟ್ಟಿದ್ದಾರೆ ಎಂದು ಖ್ವಾಜಾ ಆಸಿಫ್ ಹೇಳಿಕೊಂಡಿದ್ದಾರೆ. ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಖ್ವಾಜಾ ಆಸಿಫ್ ವಿರುದ್ಧ ತೀವ್ರ ಟೀಕೆ ಹಾಗೂ ಜೋಕುಗಳು ಹರಿದಾಡುತ್ತಿವೆ.
ಆಸಿಫ್ ಅವರು ತಮ್ಮ ಭಾಷಣದಲ್ಲಿ, “ಭಾರತದ ವಿರುದ್ಧ ನಾವು ಎಂತಹ ಕ್ರಮಗಳನ್ನು ಕೈಗೊಂಡೆವು ಎಂದರೆ, ಐಪಿಎಲ್ ಪಂದ್ಯಾವಳಿಯನ್ನು ನಿಲ್ಲಿಸಲಾಯಿತು, ಕ್ರೀಡಾಂಗಣದ ದೀಪಗಳನ್ನು ಆರಿಸಲಾಯಿತು, ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡಲಾಯಿತು. ಈ ಎಲ್ಲ ಸೈಬರ್ ದಾಳಿಗಳನ್ನು ನಮ್ಮ ಮಕ್ಕಳು (ಸೈಬರ್ ಯೋಧರು) ಮಾಡಿದ್ದಾರೆ” ಎಂದು ಹೇಳಿದ್ದಾರೆ.
ಏಪ್ರಿಲ್ 22, 2025ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತವು ಮೇ 6-7ರಂದು ಪಾಕ್ ವಿರುದ್ಧ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ನಡೆಸಿದ ಬಳಿಕ ಎರಡೂ ದೇಶಗಳ ನಡುವೆ ನಡೆದ ಘರ್ಷಣೆಯ ಬೆನ್ನಲ್ಲೇ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ತಮ್ಮ ಈ ವಿಚಿತ್ರ ಕೊಚ್ಚಿಕೊಳ್ಳುವಿಕೆಗೆ ಯಾವುದೇ ತಾಂತ್ರಿಕ ಸಾಕ್ಷ್ಯವನ್ನು ಆಸಿಫ್ ಒದಗಿಸಿಲ್ಲ. ಆದರೆ, ಐಪಿಎಲ್ 2025ರ ಪಂದ್ಯವೊಂದರಲ್ಲಿ (ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ಧರ್ಮಶಾಲಾದಲ್ಲಿ ನಡೆದ ಪಂದ್ಯ) 11ನೇ ಓವರ್ನಲ್ಲಿ ಫ್ಲಡ್ಲೈಟ್ಗಳು ಆರಿಹೋಗಿದ್ದವು. ಆದರೆ, ಇದಕ್ಕೆ ಕಾರಣ ಸೈಬರ್ ದಾಳಿಯಲ್ಲ, ಬದಲಿಗೆ ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆಯಿಂದಾಗಿ ಭದ್ರತಾ ಕಾರಣಗಳಿಗಾಗಿ ಘೋಷಿಸಲಾದ ಸಂಭಾವ್ಯ ವೈಮಾನಿಕ ದಾಳಿಯ ಎಚ್ಚರಿಕೆಯಾಗಿತ್ತು ಎಂದು ದೃಢಪಡಿಸಲಾಗಿದೆ.
ದಾಳಿ ತೀವ್ರಗೊಳ್ಳುವ ಸಾಧ್ಯತೆ ಇದ್ದುದರಿಂದ ಮುಂಜಾಗ್ರತಾ ಕ್ರಮವಾಗಿ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಆಟಗಾರರು ಹಾಗೂ ಪ್ರೇಕ್ಷಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿತ್ತು.
ಖ್ವಾಜಾ ಆಸಿಫ್ ಅವರ ಈ ವಾದವನ್ನು ಸಾಮಾಜಿಕ ಜಾಲತಾಣಗಳ ಬಳಕೆದಾರರು ತೀವ್ರವಾಗಿ ಟೀಕಿಸಿದ್ದು, “ಪಾಕಿಸ್ತಾನವು ಮೊದಲು ತನ್ನ ವಿದ್ಯುತ್ ಬಿಲ್ ಪಾವತಿಸಲಿ” ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. “ಐಪಿಎಲ್ ಫ್ಲಡ್ಲೈಟ್ಗಳು ವೈ-ಫೈನಲ್ಲಿ ಕೆಲಸ ಮಾಡುವುದಿಲ್ಲ, ಅವು ಸುರಕ್ಷಿತ ವಿದ್ಯುತ್ ವ್ಯವಸ್ಥೆಯ ಮೇಲೆ ಕಾರ್ಯನಿರ್ವಹಿಸುತ್ತವೆ.
ಮುಂದಿನ ಬಾರಿ ಸ್ಕೋರ್ಬೋರ್ಡ್ ಹ್ಯಾಕ್ ಮಾಡಲು ಪ್ರಯತ್ನಿಸಿ, ಅದರಲ್ಲಿ ಕನಿಷ್ಠ ಬಟನ್ಗಳಿವೆ” ಎಂದು ಮತ್ತೊಬ್ಬ ಬಳಕೆದಾರ ವ್ಯಂಗ್ಯವಾಡಿದ್ದಾರೆ. “ಚೀನಾ ಮತ್ತು ಅಮೆರಿಕವೂ ಕೇಳುತ್ತಿವೆ – ಪಾಕಿಸ್ತಾನಿಗಳು ಈ ಮಾಯಾಜಾಲವನ್ನು ಹೇಗೆ ಮಾಡಿದರು?” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಹೇಳಿಕೆಯು ಖ್ವಾಜಾ ಆಸಿಫ್ ಅವರ ಹಿಂದಿನ ಎಡವಟ್ಟುಗಳಿಗೆ ಇದು ಹೊಸ ಸೇರ್ಪಡೆಯಾಗಿದೆ. ಈ ಹಿಂದೆ, ಆಪರೇಷನ್ ಸಿಂದೂರ ಸಂದರ್ಭದಲ್ಲಿ ಪಾಕಿಸ್ತಾನವು ಭಾರತದ ರಫೇಲ್ ಯುದ್ಧವಿಮಾನಗಳನ್ನು ಧ್ವಂಸಗೊಳಿಸಿತ್ತು ಎಂದು ಆಸಿಫ್ ಹೇಳಿದ್ದರು. ಆದರೆ ಸಾಕ್ಷ್ಯ ಕೇಳಿದಾಗ “ಭಾರತದ ಸಾಮಾಜಿಕ ಜಾಲತಾಣಗಳಲ್ಲೇ ಈ ಸುದ್ದಿ ಹರಿದಾಡುತ್ತಿವೆ” ಎಂದು ಹೇಳಿ ಜಾರಿಕೊಂಡಿದ್ದರು. ಇಂಥ ಹೇಳಿಕೆಗಳ ಮೂಲಕ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡಾಗಿದ್ದರು.