ಕೋಲಾರ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ದಾಳಿ ಬಗ್ಗೆ ಭೋವಿ ಗುರುಪೀಠ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶರಣರ ವಚನಗಳು, ವಿಚಾರ ಧಾರೆಗಳ ಮೇಲೆ ದಾಳಿಯಾದಾಗ ಕೈಯಲ್ಲಿ ಶಸ್ತ್ರ ಹಿಡಿದಿದ್ದರು. ದಯವೇ ಧರ್ಮದ ಮೂಲವಯ್ಯಾ ಎಂದವರು ಕೂಡ ಕೈಯಲ್ಲಿ ಖಡ್ಗ ಹಿಡಿದಿದ್ದರು. ಇದೀಗ ದೇಶ, ಧರ್ಮ ಉಳಿಸಲು ಎಲ್ಲರು ಒಗ್ಗಟ್ಟಾಗಿ ಹೋರಾಡಬೇಕಿದೆ. ದೇಶ ಹಾಗೂ ಧರ್ಮಕ್ಕಾಗಿ ನಾವು ಹೋರಾಡಲೇಬೇಕು ಎಂದು ತಿಳಿಸಿದ್ದಾರೆ.
ನಮ್ಮ ಮನೆಯ ತಾಯಿ, ತಂಗಿ ಮೇಲೆ ದೌರ್ಜನ್ಯ ನಡೆದಾಗಿ ಸುಮ್ಮನೆ ನೋಡಿ ಕೂರಲು ಆಗುವುದಿಲ್ಲ. ಅಸ್ರ್ರ ಪ್ರಯೋಗ ಮಾಡಲೇಬೇಕು. ಭಾರತ ದೇಶ ಬರೀ ಶಾಂತಿಗೆ ಮಾತ್ರವಲ್ಲ, ಕ್ರಾಂತಿಗೂ ಬದ್ಧವಾಗಿದೆ ಎಂದು ಜಗತ್ತಿಗೆ ಸಾರಬೇಕಿದೆ. ಗಡಿಯಲ್ಲಿನ ಭಯೋತ್ಪಾದನೆ ನಾಡಿನೊಳಗೆ ಪ್ರವೇಶ ಮಾಡಿದೆ ಅದನ್ನು ತಡೆಯಲು ಛಡಿಯೇಟು ಅನಿವಾರ್ಯ ಎಂದಿದ್ದಾರೆ.
ಯುದ್ದ ಬೇಡ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಒಬ್ಬೊಬ್ಬರದ್ದು ಒಂದೊಂದು ನಿಲುವು. ಅವರ ಮನೆಗೆ ಭಯೋತ್ಪಾದಕರು ಹೋದರೆ ಹಾಗೆ ಶಾಂತಿ ಮಂತ್ರ ಪಠಿಸುತ್ತಾರಾ? ನಮ್ಮ ಮನೆಯ ರಕ್ಷಣೆ ನಮ್ಮ ಹೊಣೆ, ನಮ್ಮ ಅಭಿಪ್ರಾಯ ದೇಶದ ಅಭಿಪ್ರಾಯ ಆಗಲಿದೆ ಎಂದು ಹೇಳಿದ್ದಾರೆ.