ನವದೆಹಲಿ: ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ (6E 2142) ಇತ್ತೀಚೆಗೆ ಭಾರೀ ಗಾಳಿ ಮಳೆಯಿಂದಾಗಿ ಪ್ರಕ್ಷುಬ್ಧತೆಗೆ ಸಿಲುಕಿತ್ತು. ಒಂದು ಹಂತದಲ್ಲಿ ವಿಮಾನದಲ್ಲಿ 220ಕ್ಕೂ ಹೆಚ್ಚು ಪ್ರಯಾಣಿಕರು ಸಾವಿನ ಕದ ತಟ್ಟಿ ವಾಪಸಾಗಿದ್ದರು. ಈ ಘಟನೆ ನಡೆದಿದ್ದು ಬುಧವಾರ(ಮೇ 21ರಂದು). ಆದರೆ, ಈ ಘಟನೆಯು ಪಾಪಿ ಪಾಕಿಸ್ತಾನದ ಅಮಾನವೀಯ ಮುಖವನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.

ಇಂಡಿಗೋ ವಿಮಾನವು ಅಮೃತಸರದ ಮೇಲೆ ಹಾರುತ್ತಿದ್ದಾಗ, ಪೈಲಟ್ ತೀವ್ರವಾದ ವಾತಾವರಣದ ಅಸ್ಥಿರತೆಯನ್ನು ಗಮನಿಸಿ, ಸುರಕ್ಷತೆಗಾಗಿ ಪಾಕಿಸ್ತಾನದ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಬಳಸಲು ಲಾಹೋರ್ ಏರ್ ಟ್ರಾಫಿಕ್ ಕಂಟ್ರೋಲ್ (ATC)ಗೆ ಅನುಮತಿ ಕೋರಿದ್ದರು. ಆದರೆ ಅನುಮತಿ ನಿರಾಕರಿಸಿದ ಪಾಕಿಸ್ತಾನವು, ಯಾವ ಕಾರಣಕ್ಕೂ ತನ್ನ ವಾಯುಪ್ರದೇಶವನ್ನು ಬಳಸಲು ಭಾರತದ ವಿಮಾನಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿತ್ತು. ಈ ಮೂಲಕ ಪಾಕಿಸ್ತಾನವು ತನ್ನ ರಕ್ಕಸ ಬುದ್ಧಿಯನ್ನು ತೋರಿಸಿತು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.
ಪಾಕಿಸ್ತಾನವು ತನ್ನ ವಾಯುಪ್ರದೇಶ ಬಳಕೆಗೆ ನಿರಾಕರಿಸಿದ ಕಾರಣ ವಿಮಾನವು ತನ್ನ ಮೂಲ ಮಾರ್ಗದಲ್ಲೇ ಮುಂದುವರಿಯಬೇಕಾಯಿತು. ಈ ವೇಳೆ ಭಾರೀ ಗಾಳಿಮಳೆಗೆ ಸಿಲುಕಿತು. ಆಲಿಕಲ್ಲುಗಳು ಬಂದು ಅಪ್ಪಳಿಸಿದ ಪರಿಣಾಮ ವಿಮಾನದ ಮೂತಿ (ರೇಡೋಮ್) ಹಾನಿಗೊಳಗಾಯಿತು. ಆದರೆ ಅದೃಷ್ಟವಶಾತ್ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಒಳಗಿದ್ದ ಎಲ್ಲ 220 ಮಂದಿಯೂ ನಿಟ್ಟುಸಿರು ಬಿಟ್ಟರು.
ಪಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ತೀವ್ರಗೊಂಡಿದೆ. ಇದಕ್ಕೆ ಪ್ರತೀಕಾರವೆಂಬಂತೆ ಪಾಕಿಸ್ತಾನವು ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ ಮತ್ತು ಭಾರತವೂ ಪಾಕಿಸ್ತಾನದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಈ ರಾಜಕೀಯ ಒತ್ತಡವೇ ಲಾಹೋರ್ ATC ಯಿಂದ ಅನುಮತಿ ನಿರಾಕರಣೆಗೆ ಕಾರಣ ಎಂದು ತಿಳಿದುಬಂದಿದೆ.
ಪ್ರಯಾಣಿಕರ ಭಯಾನಕ ಅನುಭವ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳು ವಿಮಾನದ ಒಳಗಿನ ಭಯಾನಕ ದೃಶ್ಯಗಳನ್ನು ತೋರಿಸಿವೆ. ಪ್ರಯಾಣಿಕರು ಭಯದಿಂದ ಕಿರುಚುತ್ತಾ, ಪ್ರಾರ್ಥನೆ ಮಾಡುತ್ತಾ ಮತ್ತು ಆಸನಗಳನ್ನು ಗಟ್ಟಿಯಾಗಿ ಹಿಡಿದಿರುವ ದೃಶ್ಯಗಳು ಅದರಲ್ಲಿವೆ. ಪ್ರಯಾಣಿಕರಲ್ಲಿ ಒಬ್ಬರಾಗಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಸಾಗರಿಕಾ ಘೋಷ್, “ಇದು ಸಾವು-ಬದುಕಿನ ನಡುವಿನ ಅನುಭವವಾಗಿತ್ತು. ವಿಮಾನ ಲ್ಯಾಂಡ್ ಆದಾಗ, ಮೂಗಿನ ಭಾಗ ಸಂಪೂರ್ಣವಾಗಿ ಹಾನಿಗೊಳಗಾಗಿತ್ತು. ಪೈಲಟ್ಗೆ ಧನ್ಯವಾದಗಳು, ಅವರು ನಮ್ಮನ್ನು ಸುರಕ್ಷಿತವಾಗಿ ಇಳಿಸಿದರು,” ಎಂದು ಹೇಳಿದ್ದಾರೆ.
ಈ ಘಟನೆಯ ಬಗ್ಗೆ ಡಿಜಿಸಿಎ ತನಿಖೆ ಆರಂಭಿಸಿದೆ. ವಿಮಾನದ ಸುರಕ್ಷತೆ ಮತ್ತು ಈ ರೀತಿಯ ಘಟನೆಗಳನ್ನು ತಡೆಗಟ್ಟಲು ಭವಿಷ್ಯದಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಪರಿಶೀಲಿಸಲಾಗುತ್ತಿದೆ.