ನವದೆಹಲಿ: ಪಹಲ್ಗಾಮ್ ದಾಳಿ ಬಳಿಕ ಭಾರತ ನಡೆಸಿದ ವಾಯುದಾಳಿಗೆ ತತ್ತರಿಸಿದ ಪಾಕಿಸ್ತಾನವು ಅಮೆರಿಕದ ಕೈಕಾಲು ಹಿಡಿದುಕೊಂಡು ಕದನವಿರಾಮ ಘೋಷಿಸಿದೆ. ಭಾರತದ ವಾಯುದಾಳಿಗೆ ಪಾಕಿಸ್ತಾನದ ಎಫ್-16 ಯುದ್ಧವಿಮಾನ ಸೇರಿ ಹಲವು ಶಸ್ತ್ರಾಸ್ತ್ರಗಳಿಗೆ ಹಾನಿಯಾಗಿದೆ. ವಾಯುನೆಲೆಗಳು ಧ್ವಂಸಗೊಂಡಿವೆ. ಇಷ್ಟಾದರೂ ಪಾಠ ಕಲಿಯದ ಪಾಕಿಸ್ತಾನವು ಸಿಂಧೂ ನದಿ ನೀರಿಗೆ ಸಂಬಂಧಿಸಿದಂತೆ ಭಾರತಕ್ಕೆ ಹುಸಿ ಬೆದರಿಕೆ ಹಾಕಿದೆ.
ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತವು ಸಿಂಧೂ ಜಲ ಒಪ್ಪಂದಕ್ಕೆ ತಡೆ ನೀಡಿದೆ. ಆ ಮೂಲಕ ಭಾರತದಿಂದ ಪಾಕಿಸ್ತಾನಕ್ಕೆ ಹರಿಯುವ ಆರು ನದಿಗಳ ನೀರನ್ನು ತಡೆಹಿಡಿಯಲಾಗಿದೆ. ಇದರಿಂದಾಗಿ ಕಂಗಾಲಾಗಿರುವ ಪಾಕಿಸ್ತಾನವೀಗ ಭಾರತದ ವಿರುದ್ಧ ಬೆದರಿಕೆಯ ತಂತ್ರ ಅನುಸರಿಸುತ್ತಿದೆ. ಹೌದು, “ಪಾಕಿಸ್ತಾನಕ್ಕೆ ನೀರು ನೀಡದಿದ್ದರೆ, ನಾವು ಭಾರತೀಯರ ಉಸಿರನ್ನೇ ನಿಲ್ಲಿಸಿಬಿಡುತ್ತೇವೆ” ಎಂದು ಪಾಕ್ ಸೇನೆ ವಕ್ತಾರ ಅಹ್ಮದ್ ಷರೀಫ್ ಚೌಧರಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಹ್ಮದ್ ಷರೀಫ್ ಚೌಧರಿ, ನೀವು ನಮಗೆ ಸಿಗುವ ನೀರನ್ನು ಬಂದ್ ಮಾಡಿದರೆ, ನಾವು ನಿಮ್ಮ ಉಸಿರನ್ನೇ ಬಂದ್ ಮಾಡಿಬಿಡುತ್ತೇವೆ ಎಂದು ಹೇಳಿದ್ದಾರೆ. ಈ ವೀಡಿಯೋ ಈಗ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಏಪ್ರಿಲ್ 23ರಂದೇ ಭಾರತವು ಜಲ ಒಪ್ಪಂದಕ್ಕೆ ತಡೆಹಿಡಿದಿದ್ದು, ಪಾಕಿಸ್ತಾನವು ನೀರಿಗೆ ಪರದಾಡುವಂತಾಗಿದೆ. ಇಷ್ಟಾದರೂ, ಪಾಕಿಸ್ತಾನದ ಸೇನಾ ವಕ್ತಾರನೇ ಉಗ್ರರ ರೀತಿ ಬೆದರಿಕೆ ಹಾಕಿದ್ದಾನೆ.
ಸಿಂಧೂ ಜಲ ಒಪ್ಪಂದದ ಕುರಿತು ಈಗಾಗಲೇ ಭಾರತವು ಸ್ಪಷ್ಟ ನಿಲುವು ವ್ಯಕ್ತಪಡಿಸಿದೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ನಿಲ್ಲಿಸುವವರೆಗೆ ಸಿಂಧೂ ಜಲ ಒಪ್ಪಂದವನ್ನು ಜಾರಿಗೆ ತರುವುದಿಲ್ಲ ಎಂದು ಖಡಕ್ ಆಗಿ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ, “ರಕ್ತ ಹಾಗೂ ನೀರು ಒಟ್ಟಿಗೆ ಹರಿಯಲು ಬಿಡುವುದಿಲ್ಲ” ಎಂದು ಹೇಳಿದ್ದಾರೆ.