ನೋಯ್ಡಾ: “ನಾನು ಪಾಕಿಸ್ತಾನದ ಮಗಳು, ಆದರೆ ಈಗ ನಾನು ಭಾರತದ ಸೊಸೆ”…
2023ರಲ್ಲಿ ಭಾರತದಲ್ಲಿರುವ ಪ್ರೇಮಿಗಾಗಿ ಪಾಕಿಸ್ತಾನದ ತನ್ನ ಕುಟುಂಬವನ್ನೇ ತೊರೆದು ಭಾರತಕ್ಕೆ ಬಂದು ಭಾರೀ ಸುದ್ದಿಯಾದ ಸೀಮಾ ಹೈದರ್. ಪಹಲ್ಗಾಮ್ ಭಯೋತ್ಪಾದಕ ದಾಳಿಯ(Pahalgam Attack) ನಂತರ ಪ್ರತೀಕಾರದ ಕ್ರಮವಾಗಿ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿರುವಂತೆಯೇ ಸೀಮಾ ಹೈದರ್ ಗಡೀಪಾರು ಭೀತಿ ಎದುರಿಸುತ್ತಿದ್ದಾರೆ.

ಸೀಮಾ ಹೈದರ್ ಅವರು 2023ರಲ್ಲಿ ತನ್ನ ಭಾರತೀಯ ಪ್ರೇಮಿ ಸಚಿನ್ ಮೀನಾ ಅವರನ್ನು ಮದುವೆಯಾಗಲೆಂದು ಪಾಕಿಸ್ತಾನವನ್ನು ತೊರೆದು ಬಂದಿದ್ದರು. ಅದಕ್ಕೂ ಮೊದಲು ಆಕೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮುಸ್ಲಿಂ ವ್ಯಕ್ತಿಯನ್ನೇ ಮದುವೆಯಾಗಿ, ನಾಲ್ಕು ಮಕ್ಕಳನ್ನೂ ಪಡೆದಿದ್ದಳು. ಸಚಿನ್ ಮೀನಾರೊಂದಿಗೆ ಸಂಪರ್ಕ ಬೆಳೆದ ಬಳಿಕ ಆಕೆ ತನ್ನ 4 ಮಕ್ಕಳೊಂದಿಗೆ ನೇಪಾಳದ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಳು.
ಈಗ ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ಹುಡುಕಿ ಹುಡುಕಿ ದೇಶದಿಂದ ಹೊರಗಟ್ಟಲು ಕೇಂದ್ರ ಸರ್ಕಾರ ನಿರ್ಧರಿಸಿರುವಂತೆಯೇ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಸೀಮಾ ಹೈದರ್, “ನಾನು ಮತ್ತೆ ಪಾಕಿಸ್ತಾನಕ್ಕೆ ಹೋಗಲು ಬಯಸುವುದಿಲ್ಲ. ನನಗೆ ಭಾರತದಲ್ಲಿ ಉಳಿಯಲು ಅವಕಾಶ ನೀಡುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡುತ್ತೇನೆ. ಅಲ್ಲದೆ ಸಚಿನ್ ಮೀನಾ ಅವರನ್ನು ಮದುವೆಯಾದ ನಂತರ ನಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ” ಎಂದು ಹೇಳಿಕೊಂಡಿದ್ದಾರೆ. “ನಾನು ಈಗ ನಿಮ್ಮ ಆಶ್ರಯದಲ್ಲಿದ್ದೇನೆ ಎಂದು ನಾನು ಮೋದಿಜೀ ಮತ್ತು ಯೋಗಿ ಜೀ ಅವರಿಗೆ ಮನವಿ ಮಾಡುತ್ತೇನೆ. ನಾನು ಪಾಕಿಸ್ತಾನದ ಮಗಳಾಗಿರಬಹುದು. ಆದರೆ ಈಗ ನಾನು ಭಾರತದ ಸೊಸೆ. ನನ್ನನ್ನು ಇಲ್ಲಿಯೇ ಇರಲು ಬಿಡಿ” ಎಂದು ಹೈದರ್ ವೀಡಿಯೊದಲ್ಲಿ ಹೇಳಿದ್ದಾರೆ.

ಇದೇ ವೇಳೆ, ಸೀಮಾ ಪರ ವಕೀಲರೂ ಮಾತನಾಡಿ, ಸೀಮಾ ಈಗ ಪಾಕಿಸ್ತಾನಿ ಪ್ರಜೆಯಲ್ಲ. ಅವರಿಗೆ ಭಾರತದಲ್ಲೇ ಉಳಿಯಲು ಅವಕಾಶ ಸಿಗಬಹುದೆಂಬ ಭರವಸೆಯಿದೆ ಎಂದಿದ್ದಾರೆ. “ಸೀಮಾ ಈಗ ಪಾಕಿಸ್ತಾನಿ ಅಲ್ಲ. ಅವರು ಗ್ರೇಟರ್ ನೋಯ್ಡಾ ನಿವಾಸಿ ಸಚಿನ್ ಮೀನಾ ಅವರನ್ನು ವಿವಾಹವಾಗಿದ್ದಾರೆ. ಇತ್ತೀಚೆಗೆ ಮಗುವಿಗೂ ಜನ್ಮ ನೀಡಿದ್ದಾರೆ. ಮಗಳಿಗೆ ಭಾರತಿ ಮೀನಾ ಎಂದು ನಾಮಕರಣವನ್ನೂ ಮಾಡಿದ್ದಾರೆ. ಅವರ ಪೌರತ್ವವು ಈಗ ಅವರ ಭಾರತೀಯ ಪತಿಯೊಂದಿಗೆ ಸಂಬಂಧ ಹೊಂದಿದೆ, ಆದ್ದರಿಂದ ಕೇಂದ್ರದ ನಿರ್ದೇಶನವು ಅವರಿಗೆ ಅನ್ವಯಿಸಬಾರದು” ಎಂದು ವಕೀಲ ಎಪಿ ಸಿಂಗ್ ತಿಳಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆಯ ಕುರಿತು ಸಂಪುಟ ಸಮಿತಿ ಸಭೆಯಲ್ಲಿ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸುವುದು ಸೇರಿದಂತೆ ಹಲವಾರು ಪ್ರತೀಕಾರದ ಕ್ರಮಗಳನ್ನು ಬುಧವಾರ ತೆಗೆದುಕೊಳ್ಳಲಾಗಿತ್ತು. ಅಲ್ಲದೇ ನಿಮ್ಮ ನಿಮ್ಮ ರಾಜ್ಯಗಳಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಪತ್ತೆ ಹಚ್ಚಿ, ಏಪ್ರಿಲ್ 27ರೊಳಗಾಗಿ ಅವರು ದೇಶ ತೊರೆಯುವಂತೆ ನೋಡಿಕೊಳ್ಳಿ ಎಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೂರವಾಣಿ ಕರೆ ಮಾಡಿ ಶುಕ್ರವಾರ ಸೂಚಿಸಿದ್ದರು.
ಏಪ್ರಿಲ್ 27 ರಿಂದ ಜಾರಿಗೆ ಬರುವಂತೆ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾಗುವ ಎಲ್ಲಾ ಮಾನ್ಯ ವೀಸಾಗಳನ್ನು ರದ್ದುಗೊಳಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ಈಗಾಗಲೇ ಘೋಷಿಸಿದೆ. ವೈದ್ಯಕೀಯ ವೀಸಾಗಳು ಏಪ್ರಿಲ್ 29 ರವರೆಗೆ ಮಾತ್ರ ಮಾನ್ಯವಾಗಿರುತ್ತವೆ. ಪ್ರಸ್ತುತ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳಿಗೆ ಅವರ ವೀಸಾ ಅವಧಿ ಮುಗಿಯುವ ಮೊದಲು ದೇಶವನ್ನು ತೊರೆಯುವಂತೆ ಸೂಚನೆ ನೀಡಲಾಗಿದೆ.
ಹೈದರ್ 2023ರ ಮೇ ತಿಂಗಳಲ್ಲಿ ಕರಾಚಿಯಲ್ಲಿರುವ ತನ್ನ ಮನೆಯನ್ನು ತೊರೆದು ಭಾರತಕ್ಕೆ ಬಂದಿದ್ದರು. ಜುಲೈನಲ್ಲಿ, ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ರಬುಪುರ ಪ್ರದೇಶದಲ್ಲಿ ಮೀನಾ ಅವರೊಂದಿಗೆ ವಾಸಿಸುತ್ತಿದ್ದ ಅವರನ್ನು ಭಾರತೀಯ ಅಧಿಕಾರಿಗಳು ಬಂಧಿಸಿದ್ದರು. 2019ರಲ್ಲಿ ಆನ್ ಲೈನ್ ಗೇಮ್ ಆಡುತ್ತಾ ಸಚಿನ್ ಮತ್ತು ಸೀಮಾ ನಡುವೆ ಪರಿಚಯವಾಗಿ, ಅದು ನಂತರ ಪ್ರೇಮಕ್ಕೆ ತಿರುಗಿತ್ತು. ಪ್ರಸ್ತುತ, ದಂಪತಿಗಳು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ವಾಸಿಸುತ್ತಿದ್ದಾರೆ.