ನವದೆಹಲಿ: 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ(Pahalgam Attack) ನಂತರ ಭದ್ರತಾ ಪಡೆಗಳು ಉಗ್ರರಿಗಾಗಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕಾಶ್ಮೀರದಾದ್ಯಂತ 87 ಪ್ರವಾಸಿ ತಾಣಗಳ ಪೈಕಿ 48 ಅನ್ನು ತಾತ್ಕಾಲಿಕವಾಗಿ ಮುಚ್ಚಿದೆ.
ಪ್ರವಾಸಿಗರಿಗೆ ಮುಕ್ತವಾಗಿರುವ 87 ತಾಣಗಳ ಪೈಕಿ, ಈಗ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಗಳು ಮತ್ತು ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿಸಲಾದ ಸ್ಥಳಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಚ್ಚಲಾಗಿರುವ ಪ್ರವಾಸಿ ತಾಣಗಳು:
ಯೂಸ್ಮಾರ್ಗ್, ತೌಸಿ ಮೈದಾನ್, ದೂದ್ ಪತ್ರಿ, ಅಹರ್ಬಾಲ್, ಕೌಸರ್ ನಾಗ್, ಬಂಗೂಸ್, ಕರಿವಾನ್ ಡೈವರ್ ಚಂದಿಗಾಮ್, ಬಂಗುಸ್ ಕಣಿವೆ, ವುಲಾರ್/ವತ್ಲಬ್, ರಾಮ್ಪೋರಾ ಮತ್ತು ರಾಜ್ಪೋರಾ ಮತ್ತು ಚೆಯಾರ್ಹಾರ್. ಇನ್ನು, ಪ್ರವಾಸಿಗರಿಗೆ ಮುಕ್ತವಾಗಿರುವ ಇತರ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏತನ್ಮಧ್ಯೆ, ಭಯೋತ್ಪಾದಕ ದಾಳಿಯ ಬಳಿಕ ಏಪ್ರಿಲ್ 23 ರಿಂದ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಗಮನಾರ್ಹವಾಗಿ ಕುಸಿದಿದೆ. ಆ ದಿನ 6,561 ಮಂದಿ ಆಗಮಿಸಿದರೆ, 11,092 ಜನರು ಶ್ರೀನಗರದಿಂದ ನಿರ್ಗಮಿಸಿದ್ದಾರೆ. ಮರುದಿನ, ಏಪ್ರಿಲ್ 24 ರಂದು, ವಿಮಾನ ನಿಲ್ದಾಣವು 118 ವಿಮಾನಗಳಲ್ಲಿ 15,836 ಪ್ರಯಾಣಿಕರ ದಟ್ಟಣೆಗೆ ಸಾಕ್ಷಿಯಾಯಿತು. ಇದರಲ್ಲಿ 4,456 ಆಗಮನ ಮತ್ತು 11,380 ನಿರ್ಗಮನಗಳು ಸೇರಿವೆ.
ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ಒಟ್ಟು 26 ಪ್ರವಾಸಿಗರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. 2019 ರ ಪುಲ್ವಾಮಾ ದಾಳಿಯ ನಂತರ ಕಣಿವೆಯಲ್ಲಿ ನಡೆದ ಭೀಕರ ದಾಳಿ ಇದಾಗಿತ್ತು. ಇದರ ಬೆನ್ನಲ್ಲೇ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಇತರ ಭದ್ರತಾ ಸಂಸ್ಥೆಗಳು ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯ ಭಾಗವಾಗಿ ಶ್ರೀನಗರ, ದೋಡಾ ಮತ್ತು ಕಿಶ್ತ್ವಾರ್ನ ಹಲವು ಕಡೆ ದಾಳಿ ನಡೆಸಿದ್ದು, ಶಂಕಿತ ಭಯೋತ್ಪಾದಕರಿಗೆ ಸಂಬಂಧಿಸಿದ ಹಲವಾರು ಮನೆಗಳನ್ನು ನೆಲಸಮಗೊಳಿಸಿವೆ.