ನವದೆಹಲಿ: ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಿಗದೆ.
ಕಾರ್ಯಕ್ರಮವೊಂದರಲ್ಲಿ ಅವರು ಭಾಗಿಯಾಗಿದ್ದ ಸಂದರ್ಭದಲ್ಲೇ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನಲಾಗಿದೆ. ಕೂಡಲೇ ಪಕ್ಷದ ಕಾರ್ಯಕರ್ತರು ಮತ್ತು ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು ಗುಜರಾತ್ ನ ಅಹಮದಾಬಾದ್ನಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾರೆ.
ಏ. 8ರಂದು ಬೆಳಗ್ಗೆ ಸಾಬರಮತಿ ಆಶ್ರಮದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಪಕ್ಷದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದಾಗ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದೆ. ಕೂಡಲೇ ಅವರನ್ನು ಅಹಮದಾಬಾದ್ನ ಝೈದುಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರ ಪುತ್ರ ಹಾಗೂ ಸಂಸದ ಕಾರ್ತಿ ಚಿದಂಬರಂ ಎಕ್ಸ್ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ. ನನ್ನ ತಂದೆ ಚಿದಂಬರಂ ಅವರಿಗೆ ಅಹಮದಾಬಾದ್ನಲ್ಲಿ ತೀವ್ರವಾದ ತಾಪಮಾನ ಮತ್ತು ನಿರ್ಜಲೀಕರಣದಿಂದಾಗಿ ಪ್ರೆಸಿನ್ಕೊಪಿ (presyncope) ಎಂಬ ತೀವ್ರ ಆರೋಗ್ಯ ಸಮಸ್ಯೆಯು ಎದುರಾಗಿದೆ. ಈಗ ಅವರು ಝೈದುಸ್ ಆಸ್ಪತ್ರೆಗೆ ದಾಖಲಾಗಿ ವೈದ್ಯರ ನಿಗಾಕ್ಕೆ ಒಳಗಿದ್ದಾರೆ. ಎಂದು ಬರೆದುಕೊಂಡಿದ್ದಾರೆ.
ಪಿ. ಚಿದಂಬರಂ ಅವರು ಅಹಮದಾಬಾದ್ನಲ್ಲಿ ನಡೆಯುತ್ತಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲು ಗುಜರಾತ್ಗೆ ಆಗಮಿಸಿದ್ದರು. ಈ ಸಮಾವೇಶವು 64 ವರ್ಷಗಳ ನಂತರ ಗುಜರಾತ್ನಲ್ಲಿ ನಡೆಯುತ್ತಿದೆ. ಗುಜರಾತ್ನಲ್ಲಿ ಪ್ರಸ್ತುತ ತೀವ್ರ ಬಿಸಿಲು (ಏಪ್ರಿಲ್ 07 ರಂದು ತಾಪಮಾನ 43 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು) ಇದ್ದು, ಹೀಗಾಗಿ ಅವರು ನಿತ್ರಾಣಗೊಂಡಿರಬಹುದು ಎನ್ನಲಾಗಿದೆ.
ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದು, ಆರಂಭಿಕ ತಪಾಸಣೆಯಲ್ಲಿ ತೀವ್ರ ಡಿಹೈಡ್ರೇಷನ್ ಮತ್ತು ಶಾಖದಿಂದ ಉಂಟಾದ ಸಮಸ್ಯೆಗಳು ಕಂಡುಬಂದಿವೆ ಎನ್ನಲಾಗಿದೆ.