ಬೆಂಗಳೂರು: ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಕಮಲ್ ಹಾಸನ್ನ್ನು ಪುಟ್ಟಗೌರಿ ಮದುವೆ ಧಾರವಾಹಿ ಖ್ಯಾತಿಯ ರಂಜನಿ ರಾಘವನ್ ಭೇಟಿ ಮಾಡಿದ್ದು, ಇದೀಗ ಮತ್ತೊಂದು ಚರ್ಚೆಗೆ ಗ್ರಾಸವಾಗಿದೆ.
ಲೇಖಕಿ, ನಟಿ, ನಿರ್ದೇಶಕಿ, ಗಾಯಕಿ ಆಗಿರುವ ರಂಜನಿ ರಾಘವನ್ ಕಮಲ್ ಹಾಸನ್ ಭೇಟಿ ಮಾಡಿ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕುರಿತಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಸ್ವತಃ ರಂಜನಿ ಈ ಕುರಿತು ಪೋಸ್ಟ್ ಮಾಡಿದ್ದರು.
ಪೋಸ್ಟ್ ಮಾಡುತ್ತಿದ್ದಂತೆ ರಂಜನಿ ರಾಘವನ್ನ್ನು ತರಾಟೆಗೆ ತೆಗೆದುಕೊಂಡಿರುವ ನೆಟ್ಟಿಗರು, ಕನ್ನಡ ವಿರೋಧಿಗೆ ಕನ್ನಡ ಪುಸ್ತಕ ಕೊಡಬೇಕಿತ್ತಾ? ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಕಮಲ್ ವಿಚಾರದಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಸಮಯದಲ್ಲಿ ತಮ್ಮ ಪುಸ್ತಕ ಪ್ರಮೋಟ್ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.