ಮೈಸೂರು: ಉತ್ತಮ ವ್ಯಕ್ತಿಗಳು, ಹೃದಯವಂತರು, ಜನರ ಬಗ್ಗೆ ಕಾಳಜಿ ಇರುವವರು ಮಾತ್ರ ರಾಜಕಾರಣಕ್ಕೆ ಬರಬೇಕು ಎಂದು ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ನಗರದ ಜೆಎಸ್ ಎಸ್ ಕಾಲೇಜಿನಲ್ಲಿ ನಡೆದ ವಿಚಾರ ಸಂಕೀರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ರಾಜಕಾರಣ ಹಾಳಾಗುತ್ತಿದೆ ಎಂದು ಉತ್ತಮರು ದೂರ ಹೋದರೆ, ಮುಂದೆ ನಾವೇ ಪಶ್ಚಾತ್ತಾಪ ಪಡಬೇಕಾಗುತ್ತದೆ. ಹೀಗಾಗಿ ಉತ್ತಮರು ರಾಜಕಾರಣಕ್ಕೆ ಬರಬೇಕು ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಒಳ್ಳೆಯದೂ ಆಗುತ್ತಿದೆ. ಕೆಟ್ಟದ್ದೂ ಆಗುತ್ತಿದೆ. ಪ್ರಜ್ಞಾವಂತರು, ಯುವಜನರು ರಾಜಕೀಯ ಕ್ಷೇತ್ರದಿಂದ ಹಿಂದೆ ಸರಿಯಬಾರದು. ಸರ್ಕಾರಿ ನೌಕರಿ ಪಡೆದುಕೊಂಡರೆ ಸಾಕೆಂದು ಮಾತ್ರ ಭಾವಿಸಬಾರದು. ರಾಜಕಾರಣಕ್ಕೂ ಬರಬೇಕು. ಈಗ ಎಲ್ಲ ಕ್ಷೇತ್ರಗಳಂತೆಯೇ ರಾಜಕಾರಣದ ಗುಣಮಟ್ಟ ಕುಸಿಯುತ್ತಿದೆ. ಹಣ ಕೊಟ್ಟು ಮತ ಕೇಳುವವರು ಹಾಗೂ ಹಣ ಪಡೆದು ಮತ ಹಾಕುವವರು ಇರುವವರೆಗೂ ಪ್ರಜಾಪ್ರಭುತ್ವ ಸುಭದ್ರವಾಗಿರುತ್ತದೆಯೇ?, ಪ್ರತಿ ಪಕ್ಷದಲ್ಲೂ ಜಾತಿ ನೋಡುತ್ತಾರೆ. ಟಿಕೆಟ್ ಕೊಡುವಾಗ ಹಣವೆಷ್ಟಿದೆ? ಎಷ್ಟು ಕೋಟಿ ಖರ್ಚು ಮಾಡಬಲ್ಲ? ಎಂಬುವುದೇ ಅಸ್ತ್ರವಾಗಿದೆ. ಹೀಗಾಗಿ ಸಜ್ಜನರ ಪ್ರವೇಶ ಅವಶ್ಯವಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕ ಡಾ. ಗವಿಸಿದ್ದಯ್ಯ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ, ಪ್ರಾಂಶುಪಾಲ ಡಾ.ಎಂ. ಪ್ರಭು ಇದ್ದರು.