ಬೀದರ್: ತುರ್ತು ಪರಿಸ್ಥಿತಿ ಹೇರಿ 50 ವರ್ಷ ಕಳೆದ ಹಿನ್ನೆಲೆಯಲ್ಲಿ ಬೀದರ್ನಲ್ಲಿ ಬಿಜೆಪಿಯಿಂದ ಕರಾಳ ದಿನ ಆಚರಣೆ ನಡೆಸಲಾಯಿತು.
ಪರಿಷತ್ನ ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಆಚರಣೆ ನಡೆಸಲಾಯಿತು. ಬೀದರ್ನ ಮೈಲೂರ ಕ್ರಾಸ್ನಲ್ಲಿರುವ ಕಾಜಿ ಫಂಕ್ಷನ್ ಹಾಲ್ನಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಅಂದು ದೇಶಕ್ಕೆ ಆಪತ್ತು ಬಂದಿರಲಿಲ್ಲ. ಇಂದಿರಾ ಗಾಂಧಿ ಅವರಿಗೆ ಮಾತ್ರ ಬಂದಿತ್ತು. ಆಗಿನ ಕಾಲದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ದೇಶಕ್ಕಾಗಿ ಅಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಾಗೂ ಅಧಿಕಾರ ರಕ್ಷಿಸಿಕೊಳ್ಳಲು. ತುರ್ತು ಪರಿಸ್ಥಿತಿ ನಿಮ್ಮ ಸ್ವಾರ್ಥಕ್ಕಾಗಿ. ಇದರಿಂದಾಗಿ ದೇಶಕ್ಕೆ ಅನ್ಯಾಯವಾಗಿದೆ.
ಅವತ್ತು ಸಂವಿಧಾನಕ್ಕೆ ಆಪತ್ತು ಇತ್ತು. ಇವತ್ತು ಯಾವುದೇ ಆಪತ್ತು ಇಲ್ಲ. ಈಗ ಆಪತ್ತು ಬಂದಿರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಓಟ್ ಬ್ಯಾಂಕ್ ದಿನೇ ದಿನೇ ಕಡಿಮೆ ಆಗುತ್ತಿದೆ. ನಮ್ಮ ಅಧಿಕಾರ ಎಲ್ಲ ರಾಜ್ಯಗಳಿಂದ ತಪ್ಪಿ ಹೋಗುತ್ತಿದೆ ಎಂಬ ಭಯ ಕಾಡುತ್ತಿದೆ. ಇಂದಿರಾಗಾಂಧಿ ಮಾಡಿರುವುದು ಅಪರಾಧ ಅಂತಾ ಯಾರೂ ಹೇಳುತ್ತಿಲ್ಲ. ಈಗ ಕೈಯಲ್ಲಿ ಸಂವಿಧಾನ ಪುಸ್ತಕ ಹಿಡಿದು ಸಂವಿಧಾನ ಆಪತ್ತಿನಲ್ಲಿದೆ ರಕ್ಷಣೆ ಮಾಡ್ತೀವಿ ಅಂತಾರೆ. ಸಂವಿಧಾನ ರಕ್ಷಿಸುವವರು ನೀವಲ್ಲ. ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಈ ದೇಶದ ಪ್ರತಿಯೊಬ್ಬ ನಾಗರಿಕರು ರಕ್ಷಿಸುತ್ತಾರೆ. ಗೌರವಿಸುತ್ತಾರೆ. ಆದರೆ, ಸಂವಿಧಾನವನ್ನ ತಿರಸ್ಕರಿಸಿದವರು ಕಾಂಗ್ರೆಸ್ನವರು ಎಂದು ವಾಗ್ದಾಳಿ ನಡೆಸಿದ್ದಾರೆ.