ನಿವೃತ್ತ ಡಿಜಿ, ಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಆರೋಪಿತೆ ಪಲ್ಲವಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸಿಸಿಬಿ ಪೊಲೀಸರು ಕೋರ್ಟ್ ಅನುಮತಿ ಪಡೆದು ಏಳು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ಜೊತೆಗೆ 2ನೇ ಆರೋಪಿ ಕೃತಿ ವಿಚಾರಣೆಗೂ ಸಿಸಿಬಿ ಸಿದ್ದತೆ ಮಾಡಿಕೊಂಡಿದೆ. ಕೃತಿ ಮಾನಸಿಕವಾಗಿ ಸ್ಥಿರವಾಗಿದ್ದಾರೆಂದು ನಿಮಾನ್ಸ್ ನಿಂದ ರಿಪೋರ್ಟ್ ಬಂದಿದೆ. ಕೃತಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಬಹುದು ಎಂದು ವೈದ್ಯರು ವರದಿ ನೀಡಿದ್ದಾರೆ ಎನ್ನಲಾಗಿದೆ.
ಮೇ 20ರಂದು ಎಚ್ಎಸ್ಆರ್ ಲೇಔಟ್ನ ಮನೆಯಲ್ಲಿ ಓಂ ಪ್ರಕಾಶ್ ಹತ್ಯೆ ನಡೆದಿತ್ತು. ಸದ್ಯ ಮೂರು ದಿನ ಆಸ್ಪತ್ರೆಯಲ್ಲಿದ್ದ ಕೃತಿ ಡಿಶ್ಚಾರ್ಜ್ ಆಗಿ, ಮನೆಗೆ ಮರಳಿ ಬಂದಿದ್ದಾರೆ. ಹೀಗಾಗಿ ಕೆಲವು ದಿನಗಳಲ್ಲಿ ನೋಟಿಸ್ ಕೊಟ್ಟು ವಿಚಾರಣೆ ನಡೆಸಲು ಸಿಸಿಬಿ ಸಿದ್ಧತೆ ಮಾಡಿಕೊಂಡಿದೆ.
ಸದ್ಯಕ್ಕೆ ಕೃತಿ ಪಾತ್ರದ ಬಗ್ಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ತನಿಖೆ ಮುಂದುವರೆದ ಭಾಗದಲ್ಲಿ ಸಾಕ್ಷ್ಯ ಸಿಕ್ಕಲ್ಲಿ ವಶಕ್ಕೆ ಪಡೆದು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.