ಬೆಂಗಳೂರು: ನಕಲಿ ಸಹೋದರಿ ಐಶ್ವರ್ಯ ಗೌಡ ವಂಚನೆ (Aishwarya Gowda Case) ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಮಾಜಿ ಸಂಸದ ಡಿ.ಕೆ. ಸುರೇಶ್ (DK Suresh) ಅವರ ವಿಚಾರಣೆ ನಡೆಸಿದ್ದು, ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಐಶ್ವರ್ಯಗೌಡ ಅರೆಸ್ಟ್ ಆಗಿದ್ದರು. ಅವರು ಡಿ.ಕೆ. ಸುರೇಶ್ ಹೆಸರು ಬಳಕೆ ಮಾಡಿಕೊಂಡು ಹಲವೆಡೆ ಅವ್ಯವಹಾರ ಮಾಡಿದ್ದರು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆ ನಡೆಸುತ್ತಿದ್ದು, ಡಿ.ಕೆ. ಸುರೇಶ್ ಗೂ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಡಿಕೆ ಸುರೇಶ್ ಇ.ಡಿ ವಿಚಾರಣೆಗೆ ಹಾಜರಾಗಿದ್ದರು.
ಈ ವೇಳೆ ಮಾತನಾಡಿರುವ ಡಿ.ಕೆ. ಸುರೇಶ್, ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮತ್ತೆ ಜೂನ್ 8ರಂದು ಹಾಜರಾಗಲು ಹೇಳಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ. ನನ್ನ ಹೆಸರು ದುರ್ಬಳಕೆಯಾಗಿದೆ. ನನ್ನೊಂದಿಗೆ ಐಶ್ವರ್ಯಾಗೌಡ ಪರಿಚಯ ಇದೆ ಅಂತ ಹೇಳಿ ಕೆಲವರು ಹಣ ಕಳೆದುಕೊಂಡಿದ್ದಾರೆ. ಈ ಕುರಿತು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದಿದ್ದಾರೆ.
ಇಂದು ಇಡಿ ಕಚೇರಿಗೆ ಹೋಗುವುದಕ್ಕೂ ಮುನ್ನ ಕೂಡ ಡಿ.ಕೆ. ಸುರೇಶ್ ಮಾತನಾಡಿದ್ದರು. ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಬೇಕು ಅಂತ ನೋಟಿಸ್ ಜಾರಿ ಮಾಡಿದ್ದರು. ಅಲ್ಲದೇ, ನನ್ನಿಂದ ಕೆಲವು ಮಾಹಿತಿಗಳನ್ನು ಕೇಳಿದ್ದರು. ನಮ್ಮ ವಕೀಲರ ಜೊತೆಗೆ ವಿಚಾರಣೆಗೆ ಹಾಜರಾಗುತ್ತಿದ್ದೇನೆ. ಆದರೆ, ನನಗೆ ಸಂಬಂಧ ಇಲ್ಲದ ವಿಷಯ ಇದು. ಆದರೂ ನನಗೆ ಯಾವ ಕಾರಣಕ್ಕೆ ನೋಟಿಸ್ ನೀಡಿದ್ದಾರೆ ಎಂಬುವುದು ನನಗೆ ಗೊತ್ತಾಗುತ್ತಿಲ್ಲ.
ಆ ಮಹಿಳೆ ನನ್ನ ಸಹೋದರಿಯ ಅಂತ ಮೌಖಿಕವಾಗಿ ಹೇಳಿ ಮೋಸ ಮಾಡಿದ್ದಾರೆ. ಅವರು ಮಾಡಿರುವ ವಂಚನೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಯಾಕೆ ನೋಟಿಸ್ ಕೊಟ್ಟಿದ್ದಾರೆ ಅನ್ನೋದು ವಿಚಾರಣೆಗೆ ಹೋದ ಮೇಲೆ ಗೊತ್ತಾಗುತ್ತೆ. ವಿಚಾರಣೆಗೆ ಸಂಪೂರ್ಣ ಸಹಕಾರ ಕೊಡುತ್ತೇನೆ ಎಂದಿದ್ದಾರೆ.
ಅವರು ಕೇಳುವ ಪ್ರಶ್ನೆಗಳ ಮೇಲೆ ಇದಕ್ಕೆ ಸಂಬಂಧ ಇದೆಯಾ? ಇಲ್ವಾ? ಎನ್ನುವುದು ಗೊತ್ತಾಗುತ್ತದೆ. ಯಾವುದಕ್ಕೆ ಸಂಬಂಧ ಇದೆ? ಯಾವುದು ಅಸಂಬದ್ಧ?. ಆ ಮಹಿಳೆಯೊಂದಿಗೆ ಯಾವುದೇ ಹಣಕಾಸಿನ ಸಂಬಂಧ ಇಲ್ಲ. ಈ ಹಿಂದೆ ಕೂಡ ನಾನು ಅದನ್ನು ತಿಳಿಸಿದ್ದೇನೆ. ನಾನು ಅವರ ಎರಡು ಕಾರ್ಯಕ್ರಮಗಳಿಗೆ ಭೇಟಿ ಕೊಟ್ಟಿದ್ದೆ. ಇದನ್ನು ಹೊರತುಪಡಿಸಿದರೆ ಅವರಿಗೆ ನನಗೆ ಯಾವುದೇ ಸಂಬಂಧ ಇಲ್ಲ. ಅವರು ನನ್ನನ್ನು ಗೃಹ ಕಚೇರಿಯಲ್ಲಿ ಮೂರ್ನಾಲ್ಕು ಬಾರಿ ಭೇಟಿ ಮಾಡಿದ್ದರು. ಕೆಲವು ವಿಚಾರಗಳನ್ನು ಚರ್ಚೆ ಮಾಡಿದ್ದರು. ನನ್ನ ಕ್ಷೇತ್ರದಲ್ಲಿ ಇದ್ದರು ಎನ್ನುವ ಕಾರಣಕ್ಕೆ ಅವರ ಕಾರ್ಯಕ್ರಮಕ್ಕೆ ಹೋಗಿದ್ದೆ. ಎಲ್ಲ ವಿಚಾರಗಳನ್ನು ಅಧಿಕಾರಿಗಳು ಕೇಳುತ್ತಾರೆ. ಅವರಿಗೆ ಹೇಳುತ್ತೇನೆ. ಆ ಮಹಿಳೆ ನನ್ನ ಧ್ವನಿ ಮಿಮಿಕ್ರಿ ಮಾಡಿ ಬೇರೆಯವರನ್ನು ವಂಚಿಸಿದ್ದಾರೆ. ಆ ವಿಷಯವಾಗಿ ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರ ಬಗ್ಗೆ ಹಲವಾರು ಪ್ರಕರಣಗಳು ದಾಖಲಾಗಿವೆ. ಆ ವಿಚಾರ ಎಲ್ಲ ನನಗೆ ಗೊತ್ತಿಲ್ಲ. ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಎಂಟ್ರಿ ಆಗಿದೆ. ಯಾವ ಮಾನದಂಡ ಇಟ್ಟುಕೊಂಡು ನನ್ನನ್ನು ಕರೆದಿದ್ದಾರೆ ಗೊತ್ತಿಲ್ಲ. ಇಡಿ ನೋಟಿಸ್ ನೀಡಿರುವುದೇ ಪ್ರಶ್ನೆಯಾಗಿ ಉಳಿದಿದೆ. ಇಡಿ ವ್ಯಾಪ್ತಿ ಮೀರಿ ನಡೆದುಕೊಳ್ಳುತ್ತಿದೆ. ಆದರೂ ಎಚ್ಚೆತ್ತುಕೊಳ್ಳಲಿಲ್ಲ ಎಂದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬಂದಂತೆ. ಇಡಿ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಮುಂದೆ ಏನಾಗುತ್ತದೆಯೋ ಕಾಯ್ದು ನೋಡೋಣ ಎಂದು ಹೇಳಿದ್ದರು. ಈಗ ವಿಚಾರಣೆಗೆ ಹಾಜರಾಗಿ ಮಾತನಾಡಿದ್ದಾರೆ.