ಬೆಂಗಳೂರು: ಯಲಹಂಕ ಉಪ ನಗರ ದೊಡ್ಡಬಳ್ಳಾಪುರ ಮುಖ್ಯ ರಸ್ತೆಯಲ್ಲಿ ಕೈಗೆತ್ತಿಕೊಂಡಿರುವ ಮೇಲ್ಸೇತುವೆ ಕಾಮಗಾರಿಯನ್ನು ಡಿಸೆಂಬರ್-2025ರ ಅಂತ್ಯದೊಳಗಾಗಿ ಪೂರ್ಣಗೊಳಿಸಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯಲಹಂಕ ವಲಯದ ಯಲಹಂಕ ಉಪನಗರ ವ್ಯಾಪ್ತಿಯಲ್ಲಿ ಬರುವ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಮುಖ್ಯ ರಸ್ತೆ ಬಳಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ದೊಡ್ಡಬಳ್ಳಾಪುರ ಮುಖ್ಯ ರಸ್ತೆಯಲ್ಲಿ 2 ಕಿ.ಮೀ ಉದ್ದದ ಮೇಲ್ಸೇತುವೆ ಕಾಮಗಾರಿಯು ಶೇ. 60 ರಷ್ಟು ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿಯನ್ನು ಡಿಸೆಂಬರ್-2025ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಮೇಜರ್ ಸಂದೀಪ್ ಉನ್ನಿಕೃಷ್ಣನ್ ಮುಖ್ಯ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಕೆಲವೆಡೆ ಕುಸಿತವಾಗಿದ್ದು, ಅದರಿಂದ ನಾಗರಿಕರ ಓಡಾಟಕ್ಕೆ ಸಮಸ್ಯೆ ಆಗಲಿದೆ. ಕುಸಿತವಾಗಿರುವ ಸ್ಥಳ, ಕರ್ಬ್ ಸ್ಟೋನ್ ಗಳ ಅಳವಡಿಕೆ ಸೇರಿದಂತೆ ಇನ್ನಿತರೆ ದುರಸ್ತಿ ಕಾರ್ಯ ಕೈಗೊಂಡು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪಾದಚಾರಿ ಮಾರ್ಗದಲ್ಲಿ ಬೆಸ್ಕಾಂ ವತಿಯಿಂದ ಟ್ರಾನ್ಸಫಾರ್ಮರ್ ಗೆ ಅಳವಡಿಸಿದ ಕಂಬದಲ್ಲಿ ಕಬ್ಬಿಣದ ರಾಡ್ಗಳು ತುಂಬಾ ಕೆಳಭಾಗದಲ್ಲಿರುವುದರಿಂದ ಪಾದಚಾರಿ ಮಾರ್ಗದಲ್ಲಿ ಸಾರ್ವಜನಿಕರು ಓಡಾಡಲು ತೊಂದರೆಯಾಗಲಿದೆ. ಈ ಸಂಬಂಧ ಕೂಡಲೇ ಅದನ್ನು ಸರಿಪಡಿಸುವಂತೆ ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ತ್ಯಾಜ್ಯ ಬಿಸಾಡಿದವರಿಗೆ ದಂಡ ವಿಧಿಸಿ:
ಯಲಹಂಕ ಉಪನಗರ 16ನೇ ಬಿ-ಅಡ್ಡ ರಸ್ತೆಯಲ್ಲಿ ಕೆಲವು ಅಂಗಡಿ ಮಾಲೀಕರು ಪಾದಚಾರಿ ಮಾರ್ಗದಲ್ಲಿ ತ್ಯಾಜ್ಯ ಬಿಸಾಡಿರುವುದನ್ನು ಗಮನಿಸಿ, ಅಂಗಡಿ ಮಾಲೀಕರಿಗೆ ದಂಡ ವಿಧಿಸುವಂತೆ ಮಾರ್ಷಲ್ಗಳಿಗೆ ತಿಳಿಸಿದರು. ಜೊತೆಗೆ ಮತ್ತೆ ರಸ್ತೆ ಬದಿ, ಖಾಲಿ ಜಾಗದಲ್ಲಿ ತ್ಯಾಜ್ಯ ಬಿಸಾಡದಂತೆ ಸೂಚನೆ ನೀಡಲು ತಿಳಿಸಿದರು.
ಪಾದಚಾರಿ ಮಾರ್ಗಕ್ಕೆ ಸ್ಲ್ಯಾಬ್ಗಳನ್ನು ಅಳವಡಿಸಿ:
ಚಿಕ್ಕಬೊಮ್ಮಸಂದ್ರ ಕ್ರಾಸ್ನಲ್ಲಿ 15 ಮೀಟರ್ಗಳಷ್ಟು ಉದ್ದದ ಪಾದಚಾರಿ ಮಾರ್ಗಕ್ಕೆ ಸ್ಲ್ಯಾಬ್ಗಳನ್ನು ಅಳವಡಿಸಿರುವುದಿಲ್ಲ. ಇದನ್ನು ಗಮನಿಸಿ ಕೂಡಲೇ ಪಾದಚಾರಿ ಮಾರ್ಗಕ್ಕೆ ಸ್ಲ್ಯಾಬ್ಗಳನ್ನು ಅಳವಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರ ಮೇಲೆ ಕ್ರಮ:
ಯಲಹಂಕ ಉಪನಗರ ಎ- ಸೆಕ್ಟರ್ನಲ್ಲಿರುವ 1ನೇ ಮುಖ್ಯರಸ್ತೆಯಲ್ಲಿ ಕಟ್ಟಡವನ್ನು ನಿರ್ಮಿಸುತ್ತಿರುವುದನ್ನು ಗಮನಿಸಿದರು. ಸದರಿ ಕಟ್ಟಡವನ್ನು ನಕ್ಷೆ ಉಲ್ಲಂಘಿಸಿ ನಿರ್ಮಿಸುತ್ತಿದ್ದು, ಕೂಡಲೇ ಪಾಲಿಕೆ ಕಾಯ್ದೆ 2020ರ ಅನ್ವಯ ನೋಟಿಸ್ ನೀಡಿ ನಕ್ಷೆ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡದ ವ್ಯತಿರಿಕ್ತ ಭಾಗಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅದಲ್ಲದೆ ಯಲಹಂಕ ವಲಯ ವ್ಯಾಪ್ತಿಯಲ್ಲಿ ನಕ್ಷೆ ಉಲ್ಲಂಘಿಸಿ ನಿರ್ಮಿಸುತ್ತಿರುವ ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯಲಹಂಕ ಉಪನಗರದಲ್ಲಿ ನೂತನವಾಗಿ ನಿರ್ಮಿಸಿರುವ ವಾಚ್ ಟವರ್, ಸೈಕಲ್ ಟ್ರ್ಯಾಕ್, ಕಾರ್ ಟವರ್, ಕನ್ನಡ ಅಕ್ಷರ ಮಾಲೆ ಹಾಗೂ ಇತರೆ ಅಲಂಕಾರಿಕ ದೀಪಗಳಿಗೆ ಸಂಬಂಧಿಸಿದಂತೆ ವಾರ್ಷಿಕ ನಿರ್ವಹಣೆ ಮಾಡುವುದು ಅತ್ಯಾವಶ್ಯಕವಾಗಿದ್ದು, ಇವುಗಳ ವಾರ್ಷಿಕ ನಿರ್ವಹಣೆಗೆ ಅಗತ್ಯವಿರುವ ಅನುದಾನಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಯಲಹಂಕ ವಲಯ ಆಯುಕ್ತ ಕರೀಗೌಡ, ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್, ಮುಖ್ಯ ಅಭಿಯಂತರರಾದ ರಂಗನಾಥ್, ಕಾರ್ಯಪಾಲಕ ಅಭಿಯಂತರರು, ಪಾಲಿಕೆ, ಬೆಸ್ಕಾಂ, ಜಲಮಂಡಳಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.