ನವದೆಹಲಿ: ಜಾಗತಿಕ ಹೂಡಿಕೆದಾರರ ಸಮ್ಮೇಳನದ ವೇಳೆ ಹೂಗುಚ್ಛ ಹಾಗೂ ಸ್ಮರಣಿಕೆಯನ್ನು ಸ್ವೀಕರಿಸಲು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ನಿರಾಕರಿಸಿದ್ದಾರೆ. ಇತ್ತೀಚೆಗೆ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ(Pahalgam Attack) ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೂ ನಾನು ಯಾವುದೇ ಹೂಗುಚ್ಛವಾಗಲೀ, ಸ್ವಾಗತದ ಸಂಕೇತವನ್ನಾಗಲೀ ಸ್ವೀಕರಿಸುವುದಿಲ್ಲ ಎಂದು ಶಪಥ ಮಾಡಿರುವುದಾಗಿ ಹೇಳಿದ್ದಾರೆ.
“ಪ್ರತೀಕಾರ ತೀರಿಸಿಕೊಳ್ಳುವವರೆಗೂ ಸ್ವಾಗತ ಬೇಡ” ಎಂದು ಪಾಟೀಲ್ ಗುಜರಾತಿ ಭಾಷೆಯಲ್ಲಿ ಹೇಳಿದ್ದಾರೆ. ಜತೆಗೆ ಅವರಿಗೆ ವೇದಿಕೆಯಲ್ಲಿ ಔಪಚಾರಿಕ ಹೂಗುಚ್ಛ ನೀಡಲು ಮುಂದಾದಾಗ, ಅದನ್ನು ಮತ್ತು ಸ್ಮರಣಿಕೆಯನ್ನು ಸ್ವೀಕರಿಸಲು ನಿರಾಕರಿಸಿದರು. ಪಹಲ್ಗಾಮ್ ದಾಳಿಯ ದುಷ್ಕರ್ಮಿಗಳಿಗೆ ಶಿಕ್ಷೆಯಾಗುವವರೆಗೂ ಇಂತಹ ಯಾವುದನ್ನೂ ಸ್ವೀಕರಿಸದಿರಲು ಸಚಿವರು ನಿರ್ಧರಿಸಿದ್ದಾರೆ ಎಂದು ವೇದಿಕೆಯಿಂದಲೇ ಘೋಷಣೆ ಮಾಡಲಾಯಿತು.
ಈ ವೇಳೆ ನೆರೆದಿದ್ದವರಿಗೆ ಪಾಟೀಲ್ ಕೈಮುಗಿದರು. ಆಗ ಸಚಿವರ ದೃಢ ನಿಲುವಿಗೆ ಮೆಚ್ಚುಗೆ ಸೂಚಿಸಿ ಅಲ್ಲಿ ಸೇರಿದ್ದವರೆಲ್ಲರೂ ಚಪ್ಪಾಳೆಗಳ ಸುರಿಮಳೆ ಸುರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉದ್ಯಮಿ ಅಶೋಕ್ ಮೆಹ್ತಾ ಅವರು ಮಾತನಾಡಿ, ಕೇಂದ್ರ ಸಚಿವ ಪಾಟೀಲ್ ಅವರು ವೇದಿಕೆಯ ಹೊರಗೆ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡಿದ್ದರು. ಇದರ ಬೆನ್ನಲ್ಲೇ ಪಾಕಿಸ್ತಾನದ ವಿರುದ್ಧ ಭಾರತವು ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ನಂತರದಲ್ಲಿ ಪ್ರತೀಕಾರದ ಸಮಯ ಮತ್ತು ಸ್ವರೂಪವನ್ನು ನಿರ್ಧರಿಸಲು ಸಶಸ್ತ್ರ ಪಡೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಸಂಪೂರ್ಣ ಕಾರ್ಯಾಚರಣೆಯ ಸ್ವಾತಂತ್ರ್ಯವನ್ನು ನೀಡುವುದಾಗಿ ಘೋಷಿಸಿದ್ದಾರೆ.
ಇದೇ ವೇಳೆ ದಾಳಿಯ ನಂತರ ಪಾಕಿಸ್ತಾನಕ್ಕೆ ಒಂದು ಹನಿ ಸಿಂಧೂ ನೀರನ್ನೂ ತಲುಪಲು ಸರ್ಕಾರ ಅನುಮತಿಸುವುದಿಲ್ಲ ಎಂದು ಜಲಶಕ್ತಿ ಸಚಿವರಾದ ಪಾಟೀಲ್ ಈ ಹಿಂದೆ ಹೇಳಿಕೆ ನೀಡಿದ್ದರು.