ಚಿತ್ರದುರ್ಗ: ಭದ್ರಾ ನಾಲೆ ನೀರು ವಿವಾದದ ವಿಷಯವಾಗಿ ಸಂಸದ ಗೋವಿಂದ ಕಾರಜೋಳ ಮಾತನಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಕೆಲವು ಮುಖಂಡರು ಚಿತ್ರದುರ್ಗ ಜಿಲ್ಲೆಗೆ ಕುಡಿಯುವ ನೀರು ಕೊಡಲ್ಲ ಎಂದು ಹೇಳುತ್ತಿದ್ದಾರೆ. ತಿನ್ನುವ ಅನ್ನಕ್ಕೆ, ಕುಡಿಯುವ ನೀರಿಗೆ ರಾಜಕೀಯ ಅಕ್ಷ್ಯಮ್ಯ ಅಪರಾಧ. ಈಗಾಗಲೇ ನಮ್ಮ ಬಳಿ ಸಾಕಷ್ಟು ಸುಪ್ರೀಂ ಕೋರ್ಟ್ ಆದೇಶಗಳಿವೆ. ದೇಶದ ಸಂವಿಧಾನ ಅನ್ನಕ್ಕೆ ನೀರಿಗೆ ಬೇಲಿ ಹಾಕಿಲ್ಲ. ಪೂರ್ಣಗೊಂಡಿರುವ ಈ ಯೋಜನೆಗೆ ವಿರೋಧ ಬೇಡ ಎಂದು ಮನವಿ ಮಾಡಿದ್ದಾರೆ.
ಹೊಸದುರ್ಗಮತ್ತು ತರೀಕೆರೆ ತಾಲ್ಲೂಕಿಗೆ 800 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿತ್ತು. ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಈಗ ಯೋಜನೆಗೆ ಅಡ್ಡಿ ಪಡಿಸುವುದು ಸರಿಯಲ್ಲ. ಹಾಗೆ ಅಡ್ಡಿ ಪಡಿಸುವವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
ಕುಡಿಯುವ ನೀರಿಗೆ ಯಾವುದೇ ಸೀಮೆಯ ನಿರ್ಬಂಧ ಇಲ್ಲ. 50 ವರ್ಷದಿಂದ ಮಹಾರಾಷ್ಟ್ರದ ಜಥ್ ತಾಲ್ಲೂಕಿಗೆ ಕೃಷ್ಣನದಿಯಿಂದ ಕುಡಿಯುವ ನೀರು ಕೊಟ್ಟಿದ್ದೇವೆ. ಕೃಷ್ಣ ಮತ್ತು ಭೀಮ ನದಿ ಒಣಗಿದರೆ ಮಹಾರಾಷ್ಟ್ರ ಸರ್ಕಾರ ನಮಗೆ ನೀರು ಬಿಡುತ್ತದೆ. ದಾವಣಗೆರೆ ಮತ್ತು ಚಿತ್ರದುರ್ಗದ್ದು ಹಿಂದೂಸ್ತಾನ್ ಪಾಕಿಸ್ತಾನ್ ಸಮಸ್ಯೆ ಏನೂ ಅಲ್ಲ. ಟ್ರೈಯಲ್ ರನ್ ಮುಗಿದ ಬಳಿಕ ಕೂಡಲೇ ನೀರು ಬಿಡುತ್ತಾರೆ ಎಂದಿದ್ದಾರೆ.