ನವದೆಹಲಿ: ಹಲವು ವರ್ಷಗಳಿಂದ ಪಾಕಿಸ್ತಾನದ ಐಎಸ್ಐ ಪರ ಬೇಹುಗಾರಿಕೆ ನಡೆಸುತ್ತಿದ್ದ ಹಾಗೂ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಸಮಯದಲ್ಲೂ ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ್ದ ಆರೋಪದ ಮೇರೆಗೆ ನವದೆಹಲಿಯಲ್ಲಿರುವ ಭಾರತೀಯ ನೌಕಾಪಡೆಯ ಪ್ರಧಾನ ಕಚೇರಿಯ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ವಿಶಾಲ್ ಯಾದವ್ ಎಂದು ಗುರುತಿಸಲಾಗಿದೆ. ಈತನ ಮೊಬೈಲ್ ಫೋನ್ ನಲ್ಲಿದ್ದ ಮಾಹಿತಿಗಳಿಂದ, ಈತ ನೌಕಾಪಡೆಯ ಹಾಗೂ ಇತರೆ ರಕ್ಷಣಾ ಘಟಕಗಳ ಹಲವು ಸೂಕ್ಷ್ಮ ಮತ್ತು ಮಹತ್ವದ ಮಾಹಿತಿಗಳನ್ನು ಪಾಕಿಸ್ತಾನಿ ಐಎಸ್ಐಗೆ ರವಾನಿಸಿರುವ ವಿಚಾರ ಗೊತ್ತಾಗಿದೆ. ಹಣಕ್ಕಾಗಿ ಈತ ಪಾಕ್ ಐಎಸ್ಐನ ಮಹಿಳೆಯೊಬ್ಬಳಿಗೆ ಎಲ್ಲ ಮಾಹಿತಿಗಳನ್ನೂ ರವಾನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹರ್ಯಾಣ ಮೂಲದ ವಿಶಾಲ್ ಯಾದವ್ ನೌಕಾಪಡೆಯ ಪ್ರಧಾನ ಕಚೇರಿಯಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಈತನನ್ನು ಬುಧವಾರ ರಾತ್ರಿ ರಾಜಸ್ಥಾನ ಪೊಲೀಸರ ಗುಪ್ತಚರ ಘಟಕ ಸೆರೆಹಿಡಿದಿದೆ. ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳು ನಡೆಸುತ್ತಿರುವ ಬೇಹುಗಾರಿಕಾ ಚಟುವಟಿಕೆಗಳ ಮೇಲೆ ನಿರಂತರವಾಗಿ ನಿಗಾ ಇಡುತ್ತಿದ್ದ ರಾಜಸ್ಥಾನದ ಸಿಐಡಿ ಗುಪ್ತಚರ ಘಟಕಕ್ಕೆ ವಿಶಾಲ್ ಯಾದವ್ ಕುರಿತು ಸುಳಿವು ಸಿಕ್ಕಿತ್ತು. ಆತ ಪಾಕಿಸ್ತಾನಿ ಗುಪ್ತಚರ ಸಂಸ್ಥೆಯ ಮಹಿಳೆಯೊಂದಿಗೆ ಸಂಪರ್ಕದಲ್ಲಿರುವುದು ಕೂಡ ತಿಳಿದುಬಂದಿತ್ತು. ಈ ಮಹಿಳೆಯು ತನ್ನನ್ನು ತಾನು ಪ್ರಿಯಾ ಶರ್ಮಾ ಎಂದು ಹೇಳಿಕೊಂಡಿದ್ದು, ವ್ಯೂಹಾತ್ಮಕ ಮಾಹಿತಿ ಒದಗಿಸಿದರೆ ಹಣ ನೀಡುವುದಾಗಿ ಆಮಿಷವೊಡ್ಡಿ ವಿಶಾಲ್ ಯಾದವ್ ನಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಷ್ಣುಕಾಂತ್ ಗುಪ್ತಾ ಹೇಳಿದ್ದಾರೆ.
ಆರೋಪಿ ವಿಶಾಲ್ ಯಾದವ್ ಆನ್ ಲೈನ್ ಗೇಮಿಂಗ್ ಚಟ ಹೊಂದಿದ್ದು, ಅದಕ್ಕಾಗಿ ಆತನಿಗೆ ಹಣದ ಅವಶ್ಯಕತೆಯಿತ್ತು ಎಂದೂ ತಿಳಿದುಬಂದಿದೆ. ಆತ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ಖಾತೆ ಮತ್ತು ನೇರವಾಗಿ ತನ್ನ ಬ್ಯಾಂಕ್ ಖಾತೆ ಮೂಲಕ ಪಾಕಿಸ್ತಾನದಿಂದ ಹಣ ಪಡೆಯುತ್ತಿದ್ದ ಎಂದೂ ತಿಳಿದುಬಂದಿದೆ.