ನವದೆಹಲಿ: ಮುಂಜಾವಿನ ಮಹಾ ಮಳೆಗೆ ರಾಷ್ಟ್ರ ರಾಜಧಾನಿ ದೆಹಲಿ ಪತರಗುಟ್ಟಿದೆ. ಅಲ್ಲದೇ, ನಾಲ್ವರು ಬಲಿಯಾಗಿದ್ದಾರೆ.
ನಸುಕಿನಲ್ಲೇ ಶುರುವಾದ ಭಾರಿ ವರ್ಷಧಾರೆಗೆ ದೆಹಲಿ ರಸ್ತೆಗಳೆಲ್ಲಾ ಜಲಾವೃತವಾಗಿವೆ. ಬೆಳಿಗ್ಗೆಯೇ ಹೊರಡಬೇಕಿದ್ದ 40ಕ್ಕೂ ಹೆಚ್ಚು ವಿಮಾನಗಳ ಹಾರಟವನ್ನು ರದ್ದುಗೊಳಿಸಲಾಗಿದೆ. 100ಕ್ಕೂ ಹೆಚ್ಚು ವಿಮಾನಗಳ ಆಗಮನದಲ್ಲಿ ವಿಳಂಬವಾಗಿದೆ. ಕೆಲ ವಿಮಾನಗಳನ್ನು ಬೇರೆಡೆಗೆ ಡೈವರ್ಟ್ ಮಾಡಲಾಗಿದೆ. ಗಂಟೆಗೆ 70ರಿಂದ 80 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಹಲವೆಡೆ ದೈತ್ಯ ಮರಗಳು ಧರಾಶಾಹಿಯಾಗಿವೆ.
ದೆಹಲಿ ಹಾಗೂ ಎನ್ ಸಿಆರ್ ವ್ಯಾಪ್ತಿಯಲ್ಲಿ ಮಳೆ ಆರ್ಭಟ ಹೆಚ್ಚಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ದೆಹಲಿಯ ಲಾಜ್ ಪತ್ ನಗರ್, ಆರ್ ಕೆ ಪುರಂ, ದ್ವಾರಕಾ ಪ್ರದೇಶಗಳು ಮಳೆಯಿಂದ ತೀರ ಹಾನಿ ಅನುಭವಿಸಿವೆ. ಮುಂದಿನ 24 ಗಂಟೆಯಲ್ಲಿ ಬಿರುಗಾಳಿ ಸಹಿತ ಮಳೆಯ ಮುನ್ಸೂಚನೆಯಿದ್ದು, ಕಟ್ಟೆಚ್ಚರ ವಹಿಸುಂತೆ ಹವಾಮಾನ ಇಲಾಖೆ ಸೂಚಿಸಿದೆ.