ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯೀಗ ಗಲಭೆಪೀಡಿತ ಪ್ರದೇಶವಾಗಿದೆ. ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯು ಹಿಂಸಾರೂಪ ತಾಳಿದೆ. ಕೋಮುಗಲಭೆಗೂ ಇದು ಪ್ರಚೋದನೆ ನೀಡಿದೆ. ಇಂತಹ ಪ್ರದೇಶದಲ್ಲಿಯೇ ಇಬ್ಬರು ಹಿಂದೂ ಪ್ರೇಮಿಗಳ ಮದುವೆಗೆ ಮುಸ್ಲಿಂ ಕುಟುಂಬವು ಸಹಾಯ ಮಾಡುವ ಮೂಲಕ ಸೌಹಾರ್ದತೆಯ ಸಂದೇಶ ಸಾರಿದೆ.
ಹೌದು, ಮುರ್ಷಿದಾಬಾದ್ ಜಿಲ್ಲೆ ಭಟ್ ಶಾಲಾ ಪ್ರದೇಶದಲ್ಲಿ 20 ವರ್ಷದ ಸಿಮುಲ್ ಹಾಗೂ 18 ವರ್ಷದ ಶಿಯುಲಿ ಅವರು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಇವರಿಗೆ ಮುಸ್ತಾಫ ಶೇಖ್ ಎಂಬ ಮುಸ್ಲಿಂ ಕುಟುಂಬವು ಮದುವೆಯಾಗಲು ನೆರವಾಗಿದೆ. ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಶೇಖ್ ಕುಟುಂಬವು ನೆರವು ನೀಡುವ ಮೂಲಕ ಸೌಹಾರ್ದತೆಯ ಸಂದೇಶ ರವಾನಿಸಿದೆ. ಮುಸ್ತಾಫ ಶೇಖ್ ಸೇರಿ ಮುಸ್ಲಿಮರ ಹೃದಯ ವೈಶಾಲ್ಯತೆ ಕುರಿತು ಮೆಚ್ಚುಗೆಗಳು ವ್ಯಕ್ತವಾಗಿವೆ.
ಮುಸ್ತಾಫ ಶೇಖ್ ಸೇರಿ ಹಲವು ಮುಸ್ಲಿಮರು ಭಟ್ ಶಾಲಾ ಪ್ರದೇಶದಲ್ಲಿ ಇಟ್ಟಿಗೆ ಗೂಡು ಹೊಂದಿದ್ದಾರೆ. ಈ ಇಟ್ಟಿಗೆ ಗೂಡಿನಲ್ಲಿ ಸಿಮುಲ್ ಹಾಗೂ ಶಿಯುಲಿಯು ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ಇವರ ಬಳಿ ದುಡ್ಡಿರಲಿಲ್ಲ. ಇಬ್ಬರ ಮನೆಯ ಕಡೆಯವರೂ ಪ್ರೀತಿಯನ್ನು ಒಪ್ಪಿದ್ದು, ಮದುವೆಯ ಖರ್ಚು ತೂಗಿಸಲು ಹಣವೇ ಇರಲಿಲ್ಲ.
ಮುಸ್ತಾಫ ಶೇಖ್ ಸೇರಿ ಹಲವು ಮುಸ್ಲಿಂ ನಾಯಕರು ಇವರಿಗಾಗಿಯೇ ಮದುವೆ ಸಮಾರಂಭ ಆಯೋಜಿಸಿದ್ದಾರೆ. ಮುಸ್ಲಿಮರು ತಮ್ಮ ಖರ್ಚಿನಲ್ಲಿಯೇ ವಿವಾಹ ಸಮಾರಂಭ ಆಯೋಜಿಸಿ, ಹಿಂದೂ ಸಂಪ್ರದಾಯದಂತೆಯೇ ಇಬ್ಬರೂ ಮದುವೆಯಾಗಲು ಅನುವು ಮಾಡಿಕೊಟ್ಟಿದ್ದಾರೆ. “ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲು ಅವರ ಬಳಿ ಹಣವಿರಲಿಲ್ಲ. ಇದೇ ಕಾರಣಕ್ಕೆ ಮದುವೆಯನ್ನು ಮುಂದೂಡಲಾಗಿತ್ತು. ಈಗ ನಾವೇ ನಿಂತು ಮದುವೆ ಮಾಡಿಸಿದ್ದೇವೆ” ಎಂದು ಮುಸ್ತಾಫ ತಿಳಿಸಿದ್ದಾರೆ.