ಶಿವಮೊಗ್ಗ: ದೇಶ- ರಾಜ್ಯದಲ್ಲಿ ಜಾತಿಗಣತಿ ಬಗ್ಗೆ ಚರ್ಚೆಯಾಗುತ್ತಿರುವುದು ತುಂಬಾ ಸಂತೋಷ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ಮಾಡಿ ಮಾತನಾಡಿ, ದೇಶ- ರಾಜ್ಯದಲ್ಲಿ ಜಾತಿ ಗಣತಿ ಬಗ್ಗೆ ಚರ್ಚೆಯಾಗುತ್ತಿರುವುದು ಸಂತೋಷದ ವಿಷಯವಾದರೂ ಅದರಲ್ಲಿ ರಾಜಕೀಯ ಚರ್ಚೆಯಾಗುತ್ತಿರುವುದು ನೋವಿನ ಸಂಗತಿ. ಈಗ ಈ ವಿಷಯವಾಗಿ ಕ್ರೆಡಿಟ್ ಯಾರು ತೆಗೆದುಕೊಳ್ಳಬೇಕು ಎಂಬುವ ಚರ್ಚೆಯಾಗುತ್ತಿದೆ. ಇದನ್ನು ಮೊದಲು ನಿಲ್ಲಿಸಿ. ರಾಜ್ಯದಲ್ಲಿ ಜಾತಿಗಣತಿ ಆದೇಶ ಆಗಿ, 10 ವರ್ಷ ಆಯ್ತು. 168 ಕೋಟಿ ಖರ್ಚಾಗಿದೆ. ವರದಿ ಸಲ್ಲಿಕೆಯಾಗಿ ಈಗ ಬಿಡುಗಡೆಯಾದರೂ ಚರ್ಚೆಯಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಉತ್ತರನ ಪೌರುಷ ತೋರುತ್ತಿದ್ದಾರೆ. ಅವರ ಪಕ್ಷದವರೇ ಕಾಲೆಳೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕ್ಯಾಬಿನೆಟ್ ನಲ್ಲೇ ಚರ್ಚೆ ಮಾಡ್ತಿವಿ ಅಂತಿದ್ದಾರೆ. ಲಿಂಗಾಯತ, ಒಕ್ಕಲಿಗ ಶಾಸಕರು ಚರ್ಚೆ ಮಾಡಿ, ಅಂತಿಮ ತೀರ್ಮಾನ ಮಾಡುತ್ತೇವೆ ಅಂದಿದ್ದಾರೆ. ಇದರರ್ಥ ಇನ್ನು ಜಾತಿಗಣತಿಗೆ ಮೋಕ್ಷ ಸಿಕ್ಕಿಲ್ಲ. ರಾಜಕಾರಣ ಬಿಟ್ಟು, ಚರ್ಚೆ ಮಾಡಿ, ಹೊರಗೆ ಮಾಡಿ. ನಂತರ ತಿದ್ದುಪಡಿ ಮಾಡಿದರೆ ಆಯಿತು. ಬಿಜೆಪಿ ಕೂಡ ಗೊಂದಲ ಮಾಡುವುದು ಬೇಡ. ಸಿಎಂ ಗೆ ತಾಕತ್ ಇದ್ದರೆ ಇಷ್ಟು ದಿನದೊಳಗೆ ಬಿಡುಗಡೆ ಮಾಡುತ್ತೇವೆಂದು ಹೇಳಲಿ. ಎಲ್ಲಾ ಜಾತಿಯವರಿಗೆ ನ್ಯಾಯ ಕೊಡುವುದಕ್ಕೆ ಸಿಎಂ ದಿನಾಂಕ ನಿಗದಿ ಮಾಡಲಿ. ಇಲ್ಲವಾದರೆ ಸಿಎಂ ಸ್ಥಾನ ಉಳಿಸಿಕೊಳ್ಳಲು ಮಾಡಿರುವ ಉಪಾಯ ಎನ್ನುವಂತಾಗುತ್ತದೆ ಎಂದು ಹೇಳಿದ್ದಾರೆ.
ಶಿವಮೊಗ್ಗ ಹಾಗೂ ರಾಜ್ಯದಲ್ಲಿ ಮುಸ್ಲಿಂ ಗುಂಡಾಗಿರಿ ಹೆಚ್ಚಾಗಿದೆ. ಸಿದ್ದರಾಮಯ್ಯ ಮುಸ್ಲಿಂರಿಗೆ ಬಜೆಟ್ ಕೊಟ್ಟ ಮೇಲೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಶಿವಮೊಗ್ಗದಲ್ಲೂ ರೌಡಿಗಳು ಗನ್ ಹಿಡಿದು, ಓಡಾಡುತ್ತಾರೆ. ಗುಂಡು ಹಾರಿಸುತ್ತಾರೆ. ರಾಜ್ಯದಲ್ಲಿ ಒಂದು ಸರ್ಕಾರ ಇದೆ ಅಂತಾ ಅನಿಸುತ್ತಲೇ ಇಲ್ಲ. ಪೊಲೀಸರು ಬದುಕಿದ್ದರೂ ಸತ್ತಿದ್ದಾರೆ. ಗುಂಡಾಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ.