ಬೀದರ್ : ಜಿಲ್ಲೆಯಲ್ಲಿ ಹಾಡಹಗಲೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಗಂಡ-ಹೆಂಡತಿಯ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಈ ಘಟನೆ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೊಹಿನೂರ್ ಪಹಾಡ್ ಗ್ರಾಮದ ಬಳಿ ನಡೆದಿದೆ. ರಾಜು ಕಾಂತಪ್ಪ ಕೊಳಸುರೆ (28), ಶಾರದಾ ರಾಜು ಕೊಳಸುರೆ (24) ಕೊಲೆಯಾದ ದಂಪತಿಗಳು.
ಜಾಫರ್ ವಾಡಿ ಗ್ರಾಮದ ದತ್ತಾತ್ರೇಯ ಹಾಗೂ ತುಕಾರಾಂ ಎಂಬುವವರು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಕೊಲೆ ಆರೋಪಿ ದತ್ತಾತ್ರೇಯನ ತಂಗಿಯ ಜೊತೆಗೆ ಕೊಲೆಯಾದ ರಾಜು ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇಬ್ಬರು ಜೊತೆಗಿರುವ ಫೋಟೋಗಳನ್ನು ರಾಜು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ದತ್ತಾತ್ರೇಯ ರಾಜುವಿನ ಕೊಲೆಗೆ ಸ್ಕೆಚ್ ಹಾಕಿದ್ದನಂತೆ. ಮಾತನಾಡುವ ನೆಪದಲ್ಲಿ ತಂಗಿಯಿಂದಲೇ ಕರೆ ಮಾಡಿಸಿ ರಾಜುನನ್ನು ಮುಂಬೈನಿಂದ ಜಾಫರವಾಡಿಗೆ ಬರುವಂತೆ ಆರೋಪಿಗಳು ತಿಳಿಸಿದ್ದಾರೆ.
ಜಾಫರವಾಡಿಗೆ ಬರುವುದಕ್ಕಿಂತ ಮುನ್ನವೇ ಕೊಹಿನೂರ್ ಪಹಾಡ್ ಬಳಿ 2 ವರ್ಷದ ಮಗನ ಕಣ್ಮುಂದೆಯೇ ದಂಪತಿಗಳನ್ನ ಭೀಕರವಾಗಿ ಕೊಲೆ ಮಾಡಲಾಗಿದೆ. ಕೊಲೆಗೈದ ಬಳಿಕ ಪೊಲೀಸರಿಗೆ ಆರೋಪಿಗಳು ಶರಣಾಗಿದ್ದಾರೆ. ಬಸವಕಲ್ಯಾಣದ ಮಂಠಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಬೀದರ್ ಎಸ್ಪಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.