ಒಂದಂತೂ ನಿಶ್ಚಿತ. ಭಾರತ ದೃಡ ಸಂಕಲ್ಪ ಮಾಡಿ ಆಗಿದೆ. ಉಗ್ರವಾದವನ್ನು ಬೇರು ಸಹಿತ ಕಿತ್ತು ಹಾಕಲೇ ಬೇಕೆನ್ನುವ ಸಂಗ್ರಾಮದಲ್ಲಿ ಶಂಖನಾದ ಮೊಳಗಿಯಾಗಿದೆ. ಮೋದಿಯ ಈ ಅಶ್ವಮೇಧ ಯಾಗದ ಕುದುರೆ ಲಗಾಮೀಗ ಭಾರತೀಯ ಸೇನೆ ಕೈಯಲ್ಲಿದೆ. ಪಾಕಿಸ್ತಾನದೊಳಗೆ ನುಗ್ಗಲಿರುವ ಮೋದಿಯ ಈ ಅಶ್ವವೇಗದ ಕುದುರೆಯನ್ನು ಎದುರಿಸಿ ನಿಲ್ಲುವ ತಾಕತ್ತು ಯಾರಿಗೂ ಇಲ್ಲ. ಇವತ್ತಿನವರೆಗೂ ನಾನೇ. ನಂದೇ ಅಂತಿದ್ದ ಲಷ್ಕರ್ ಉಗ್ರ ಹಫೀಜೇ ಸಯೀದ್ ಗೂ ಈಗ ನಿದ್ರೆಯಲ್ಲೂ ಭಾರತದ್ದೇ ಕನವರಿಕೆಯಾಗಿದೆ.
ಪಹಲ್ಗಾಮ್ ದಾಳಿ ಬೆನ್ನಲ್ಲೇ ಹಫೀಜ್ ಗೆ ಹೆಚ್ಚಿದ ಆತಂಕ
ಪಹಲ್ಗಾಮ್ ನಲ್ಲಿ 26 ಪ್ರವಾಸಿಗರ ಉಸಿರು ನಿಲ್ಲಿಸಿದವರ ಪ್ರಾಣಪಕ್ಷಿ ಹಾರುವವರೆಗೂ ಅವರುಗಳ ಆತ್ಮಕ್ಕೆ ಶಾಂತಿಯಿಲ್ಲ. ಈ ಹಿಂದೆ ಉರಿ ದಾಳಿಗೆ ಪ್ರತೀಕಾರವಾಗಿ ನಡೆದ ಸರ್ಜಿಕಲ್ ಸ್ಟ್ರೈಕ್ ಬದಲಾದ ಭಾರತದ ಕೈಗನ್ನಡಿಯಾಗಿತ್ತು. ಈಗ ಪಹಲ್ಗಾಮ್ ಸರದಿ. ಬಂಕರ್ ಸೇರಿರುವ ಜಿಹಾದಿ ಹೆಗ್ಗಣಗಳನ್ನು ಹೆಕ್ಕಿ ತೆಗೆದು ಬೇಟೆಯಾಡೋ ಮಾಸ್ಟರ್ ಪ್ಲ್ಯಾನ್ ಸಿದ್ಧವಾಗಿದೆ. ಇದೊಂದೇ ಬೆಳವಣಿಗೆ ರಾಜನಂತೆ ಮೆರೀತಿದ್ದ ಹಫೀಜ್ ಸಯೀದ್ ಗೆ ಬಿಲ ಸೇರುವಂತೆ ಮಾಡಿದೆ. ಸರ್ಜಿಕಲ್ ಸ್ಟ್ರೈಕ್ ಅನ್ನೋ ಆತಂಕ 77 ವರ್ಷದ ನರರಾಕ್ಷಸನಿಗೆ ಇನ್ನಿಲ್ಲದ ಪ್ರಾಣ ಭೀತಿಯನ್ನು ತಂದಿದೆ.
ಹಫೀಜ್ ಕಾವಲಿಗೆ ಏಳು ಸುತ್ತಿನ ಪಹರೆ
ಪಹಲ್ಗಾಮ್ ದಾಳಿ ಬೆನ್ನಲ್ಲೇ ಭಾರತದಿಂದ ದಾಳಿ ಅಂತಾ ಕನವರಿಸುತ್ತಲೇ ಬರುತ್ತಿರುವ ಪಾಕ್ ಅದೆಷ್ಟರ ಮಟ್ಟಿಗೆ ಪತರಗುಟ್ಟಿದೆ ಅನ್ನುವುದು ಸ್ಪಷ್ಟ. ಜಗತ್ತಿನ ಕಣ್ಣಲ್ಲಿ 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಪಾಕ್ ಜೈಲಿನಲ್ಲಿದ್ದಾನೆ. ಭಾರತ ಮತ್ತು ಅಮೆರಿಕ ಪಾಲಿಗೆ ಮೋಸ್ಟ್ ವಾಂಟೆಡ್ ಆಗಿರೋ ಹಫೀಸ್ ಅಸಲಿಗೆ ಲಾಹೋರ್ ನಲ್ಲಿರುವ ಮೊಹಲ್ಲಾ ಜೋಹರ್ ನ ತನ್ನ ಬಂಗಲೆಯಲ್ಲಿದ್ದಾನೆ.
ಈ ಬಂಗಲೆಯ ಕಾವಲಿಗೀಗ ಪಾಕ್ ಸರ್ಕಾರ ಮತ್ತು ಐಎಸ್ ಐ ಏಳುಸುತ್ತಿನ ಕೋಟೆ ಕಟ್ಟಿದೆ. ಹಫೀಜ್ ಭದ್ರತೆ ಹೊಣೆಯನ್ನು ಪಾಕಿಸ್ತಾನದ ಸ್ಪೆಷಲ್ ಸರ್ವೀಸ್ ಗ್ರೂಪ್ ನ ಪ್ಯಾರಾ ಕಮಾಂಡೋಗಳ ಹೆಗಲಿಗೇರಿಸಿದೆ. ಬೃಹತ್ ಬಂಗಲೆಯ 1 ಕಿಲೋಮೀಟರ್ ವ್ಯಾಪ್ತಿ ಸುತ್ತಲೂ ಸಿಸಿಟಿವಿ ಕಣ್ಗಾವಲು ಕಲ್ಪಿಸಲಾಗಿದೆ. ಭದ್ರತಾ ಪಡೆಗಳ ಕಂಟ್ರೋಲ್ ರೂಂ ಕೂಡ ತೆರೆಯಲಾಗಿದ್ದು, 24 ಗಂಟೆ ಹದ್ದಿನ ಕಣ್ಣಿಟ್ಟು ಕಾವಲು ಕಾಯಲಾಗುತ್ತಿದೆ. ಹಫೀಜ್ ಮನೆಗೆ ಈಗ ಒಂದು ಸಬ್ ಜೈಲಿಗೆ ನೀಡುವಂಥಾ ಭದ್ರತೆ ಜೊತೆ ಪ್ಯಾರಾ ಕಮಾಂಡೋಗಳನ್ನು ನಿಯೋಜಿಸಲಾಗಿದೆ.
46 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಉಗ್ರ
2022 ಹಾಗೂ 2019ರ ಭಯೋತ್ಪಾದನಾ ಕೃತ್ಯ ಕೇಸ್ ಗಳಲ್ಲಿ ಕ್ರಮವಾಗಿ ಹಫೀಸ್ ಸಯೀದ್ 31 ಹಾಗೂ 15 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಈ ಮೂಲಕ 46 ವರ್ಷಗಳ ಕತ್ತಲ ಕೋಣೆ ವಾಸದಲ್ಲಿರಬೇಕು. ಆದರೆ ಐಎಸ್ ಐ ಕೃಪಾಶೀರ್ವಾದದಲ್ಲಿರುವ ಹಫೀಜ್ ತನ್ನ ಮನೆಯಲ್ಲೇ ಹಾಯಾಗಿದ್ದಾನೆ. ಅಷ್ಟೇ ಅಲ್ಲಾ 2 ವರ್ಷದಲ್ಲಿ 24 ಬಾರಿ ಸಾರ್ವಜನಿಕ ಸಭೆಗಳಲ್ಲಿ ಸಯೀದ್ ಪ್ರತ್ಯಕ್ಷನಾಗಿದ್ದೆ. ಸಾಲದ್ದಕ್ಕೆ ಪಿಒಕೆಯಲ್ಲಿರುವ ಉಗ್ರರ ಲಾಂಚ್ ಪ್ಯಾಡ್ ಗಳಿಗೂ ಭೇಟಿ ನೀಡಿದ್ದಾನೆ. ಇಂತಹ ಉಗ್ರನ ಸಂಹಾರಕ್ಕೆ ಭಾರತವಂತೂ ಕಂಕಣತೊಟ್ಟಾಗಿದೆ. ಎಂಥಾ ಭದ್ರಕೋಟೆಯಲ್ಲೇ ಕುಳಿತಿದ್ರೂ ರಣಬೇಟೆಗಾರನ ಕಣ್ಣಿಂದ ಈ ಬಾರಿ ಪಾರಾಗೋ ಮಾತೇ ಇಲ್ಲ ಎನ್ನುವ ಲಕ್ಷಣಗಳು ಕಾಣುತ್ತಿವೆ.