ಮಧ್ಯಪ್ರದೇಶ: ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಪಾದಗಳಿಗೆ ಇಡೀ ದೇಶ, ಸೇನೆ ಮತ್ತು ಸೈನಿಕರು ನಮಸ್ಕರಿಸುತ್ತಾರೆ ಎಂದು ಮಧ್ಯಪ್ರದೇಶದ ಡಿಸಿಎಂ ಜಗದೀಶ್ ದೇವ್ಡಾ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಮೊನ್ನೆಯಷ್ಟೇ ಮಧ್ಯಪ್ರದೇಶದ ಸಚಿವ ವಿಜಯ್ ಶಾ, ಕರ್ನಲ್ ಸೋಫಿಯಾ ಖುರೇಷಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ಅಷ್ಟೇ ಅಲ್ಲಾ ಸುಪ್ರೀಂ ಕೋರ್ಟ್ ಸಹ ಅವರಿಗೆ ಛೀಮಾರಿ ಹಾಕಿತ್ತು. ಈ ಬೆನ್ನಲ್ಲೇ ಮಧ್ಯ ಪ್ರದೇಶ ಡಿಸಿಎಂ ವಿವಾದಾತ್ಮಕ ಹೇಳಿಕೆ ನೀಡೋ ಮೂಲಕ ವ್ಯಾಪಕ ಟೀಕೆಗೆ ತುತ್ತಾಗಿದ್ದಾರೆ.
ಜಬಲ್ಪುರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಡೀ ದೇಶ, ಸೇನೆ, ಸೈನಿಕರು ಮೋದಿಯವರ ಪಾದಗಳಿಗೆ ನಮಸ್ಕರಿಸುತ್ತಾರೆ ಎಂದಿದ್ದಾರೆ . ಅಂದು ಪಹಲ್ಗಾಮ್ಗೆ ಹೋದ ಪ್ರವಾಸಿಗರಿಗೆ ಧರ್ಮ ಕೇಳಿ, ಮಹಿಳೆಯರನ್ನ ಪಕ್ಕಕ್ಕೆ ನಿಲ್ಲಿಸಿ, ಮಕ್ಕಳ ಮುಂದೆಯೇ ಗುಂಡು ಹಾರಿಸಿ ಕೊಲ್ಲಲಾಯಿತು. ಆ ದಿನದಿಂದಲೂ ದೇಶದ ಜನರ ಮನಸ್ಸಿನಲ್ಲಿ ತುಂಬಾ ಕ್ರೋಧ ಇತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವವರೆಗೂ ನೆಮ್ಮದಿಯಿಂದ ಉಸಿರಾಡಲು ಸಾಧ್ಯವಿಲ್ಲ ಎಂಬ ಭಾವನೆ ಜನರಲ್ಲಿತ್ತು. ಸದ್ಯ ಪಹಲ್ಗಾಮ್ ದಾಳಿಗೆ ಪ್ರಧಾನಿ ಮೋದಿ ಅವರು ಕೊಟ್ಟ ಉತ್ತರವನ್ನ ಎಷ್ಟು ಹೊಗಳಿದರೂ ಸಾಲದು.
ಯಶಸ್ವಿ ಪ್ರಧಾನಿಗಳಿಗೆ ಧನ್ಯವಾದ ಹೇಳಲು ಇಡೀ ದೇಶ, ದೇಶದ ಸೈನ್ಯ ಹಾಗೂ ಸೈನಿಕರು ಅವರ ಪಾದಗಳಿಗೆ ನಮಸ್ಕರಿಸುತ್ತಾರೆ ಎಂದು ಹೇಳುತ್ತಾ ಪೇಚಿಗೆ ಸಿಲುಕಿದ್ದಾರೆ. ಈ ನಡುವೆ, ಜಗದೀಶ್ ದೇವ್ಡಾ ಹೇಳಿಕೆಯನ್ನ ಕಾಂಗ್ರೆಸ್ ಕಟುವಾಗಿ ಖಂಡಿಸಿದೆ, ಇದು ಸೇನೆಗೆ ಮಾಡಿದ ಅಪಮಾನ ಎಂದು ಕಿಡಿ ಕಾರಿದೆ.
ದೇವ್ಡಾ ಅವರ ಈ ಹೇಳಿಕೆ ತುಂಬಾ ಕೀಳುಮಟ್ಟದ್ದು. ಇದು ಸೇನೆಯ ಶೌರ್ಯ ಮತ್ತು ಸಾಹಸಕ್ಕೆ ಮಾಡಿದ ಅವಮಾನ. ಇಂದು ಇಡೀ ದೇಶವೇ ಸೇನೆಗೆ ತಲೆಬಾಗುತ್ತಿರುವಾಗ, ಬಿಜೆಪಿ ನಾಯಕರು ನಮ್ಮ ಕೆಚ್ಚೆದೆಯ ಸೇನೆಯ ಬಗ್ಗೆ ತಮ್ಮ ಕಳಪೆ ಮನಸ್ಥಿತಿಯನ್ನು ತೋರಿಸಿದ್ದಾರೆ. ಇದಕ್ಕೆ ಅವರು ಕ್ಷಮೆಯಾಚಿಸಬೇಕು. ಬಿಜೆಪಿ ಅವರನ್ನು ಡಿಸಿಎಂ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದೆ