ಲಕ್ನೋ: ಮೂರು ಮಕ್ಕಳ ತಾಯಿಯಾಗಿರುವ ಮಹಿಳೆಯೊಬ್ಬಳು ಹಿಂದೂ ಧರ್ಮಕ್ಕೆ ಮತಾಂತರವಾಗಿ, 12ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ವಿವಾಹವಾದ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಇತ್ತೀಚೆಗೆ ದೇವಸ್ಥಾನವೊಂದರಲ್ಲಿ ಈ ಮಹಿಳೆಯು 12ನೇ ತರಗತಿಯ ವಿದ್ಯಾರ್ಥಿಯನ್ನು ಮದುವೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral News) ಆಗಿದೆ.
ಮಹಿಳೆಯನ್ನು ಶಬ್ನಮ್ ಎಂದು ಗುರುತಿಸಲಾಗಿದ್ದು, ಆಕೆ ಈಗ ಹಿಂದೂ ಧರ್ಮಕ್ಕೆ ಮತಾಂತರಗೊಂಡು, ತನ್ನ ಹೆಸರನ್ನು ಶಿವಾನಿ ಎಂದು ಬದಲಿಸಿಕೊಂಡಿದ್ದಾಳೆ ಎಂದು ಹಸನ್ಪುರ ಸರ್ಕಲ್ ಆಫೀಸರ್ ದೀಪ್ ಕುಮಾರ್ ಪಂತ್ ಹೇಳಿದ್ದಾರೆ. ಅಲ್ಲದೇ, ಶಿವಾನಿಯು ಈ ಹಿಂದೆಯೇ ಎರಡು ಮದುವೆಯಾಗಿದ್ದು, ಆಕೆಗೆ ತಂದೆ-ತಾಯಿ ಯಾರೂ ಇಲ್ಲ ಎಂದೂ ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಯಲ್ಲಿರುವುದರಿಂದ ಈ ಪ್ರಕರಣ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ, 2021, ಬಲವಂತದ, ಮೋಸದ ಅಥವಾ ಇತರ ಯಾವುದೇ ಆಮಿಷದ ಮೂಲಕ ಧಾರ್ಮಿಕ ಮತಾಂತರವನ್ನು ನಿಷೇಧಿಸುತ್ತದೆ. ಈ ಮದುವೆಗೆ ಸಂಬಂಧಿಸಿದ ಪರಿಸ್ಥಿತಿಯನ್ನು ನಾವು ಪರಿಶೀಲಿಸುತ್ತಿದ್ದು, ಇಲ್ಲಿಯವರೆಗೆ ಯಾವುದೇ ದೂರುಗಳು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಶಿವಾನಿ ಮೊದಲು ಮೀರತ್ ನಲ್ಲಿ ಒಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಳು. ನಂತರ ಆತನಿಂದ ವಿಚ್ಛೇದನ ಪಡೆದಳು. ಬಳಿಕ ಆಕೆ ಸೈದನ್ವಾಲಿ ಗ್ರಾಮದ ನಿವಾಸಿ ತೌಫೀಕ್ ಎಂಬಾತನನ್ನು ಮದುವೆಯಾದಳು. ಆದರೆ, 2011ರಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ತೌಫೀಕ್ ಅಂಗವಿಕಲರಾದರು.
ಇತ್ತೀಚೆಗೆ, ಶಿವಾನಿಗೆ 12ನೇ ತರಗತಿಯ ವಿದ್ಯಾರ್ಥಿ ಶಿವನೊಂದಿಗೆ(18 ವಯಸ್ಸು) ಪ್ರೇಮಾಂಕುರವಾಗಿದ್ದು, ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಅದರಂತೆ, ಕಳೆದ ವಾರ ತೌಫೀಕ್ನಿಂದಲೂ ವಿಚ್ಛೇದನವನ್ನು ಪಡೆದ ಶಿವಾನಿ, ಹಿಂದೂಧರ್ಮಕ್ಕೆ ಮತಾಂತರಗೊಂಡು, ತನ್ನ ಹೆಸರನ್ನು ಶಬ್ನಂನಿಂದ ಶಿವಾನಿ ಎಂದು ಬದಲಿಸಿಕೊಂಡಳು.
ಈ ಎಲ್ಲ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಶಿವನ ತಂದೆ ದಾತಾರಾಮ್ ಸಿಂಗ್, ನನ್ನ ಮಗನ ನಿರ್ಧಾರವನ್ನು ನಾವು ಬೆಂಬಲಿಸುತ್ತೇನೆ. ದಂಪತಿಗಳು ಸಂತೋಷವಾಗಿದ್ದರೆ, ನಮ್ಮ ಕುಟುಂಬವು ಸಂತೋಷವಾಗಿರುತ್ತದೆ. ಇಬ್ಬರೂ ನೆಮ್ಮದಿಯಿಂದ ಒಟ್ಟಿಗೆ ಬಾಳಿದರೆ ಸಾಕು ಎಂದು ಹೇಳಿದ್ದಾರೆ.
ಉತ್ತರಪ್ರದೇಶ ಮತಾಂತರ ನಿಷೇಧ ಕಾನೂನು
ಕಳೆದ ವರ್ಷ, ಉತ್ತರ ಪ್ರದೇಶದ ಕಠಿಣ ಮತಾಂತರ ನಿಷೇಧ ಕಾನೂನು ‘ಜಾತ್ಯತೀತತೆಯ ಮನೋಭಾವವನ್ನು ಎತ್ತಿಹಿಡಿಯುವ’ ಗುರಿಯನ್ನು ಹೊಂದಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿತ್ತು. ಬಾಲಕಿಯನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ ಆರೋಪವನ್ನು ಎದುರಿಸುತ್ತಿದ್ದ ವ್ಯಕ್ತಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. “ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ, 2021, ರಾಷ್ಟ್ರದ ಸಾಮಾಜಿಕ ಸಾಮರಸ್ಯವನ್ನು ಪ್ರತಿಬಿಂಬಿಸುವ ಎಲ್ಲಾ ವ್ಯಕ್ತಿಗಳಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುವ ಉದ್ದೇಶವನ್ನು ಹೊಂದಿದೆ. ಭಾರತದಲ್ಲಿ ಜಾತ್ಯತೀತತೆಯ ಮನೋಭಾವವನ್ನು ಎತ್ತಿಹಿಡಿಯುವುದು ಈ ಕಾಯ್ದೆಯ ಉದ್ದೇಶವಾಗಿದೆ” ಎಂದು ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಹೇಳಿದ್ದರು.
ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೆ ತಮ್ಮ ಧರ್ಮವನ್ನು ಪ್ರತಿಪಾದಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ನೀಡುತ್ತದೆಯಾದರೂ, ಇದು ಇತರರನ್ನು ಮತಾಂತರಿಸುವ ‘ಸಾಮೂಹಿಕ ಹಕ್ಕು’ ಎಂದು ಅರ್ಥಮಾಡಿಕೊಳ್ಳಬಾರದು ಎಂದು ಏಕಸದಸ್ಯ ಪೀಠ ಹೇಳಿತ್ತು. “ಏಕೆಂದರೆ ಧಾರ್ಮಿಕ ಸ್ವಾತಂತ್ರ್ಯವು ಇಬ್ಬರಿಗೂ ಸಮಾನವಾಗಿ ಲಭ್ಯವಿದೆ: ಮತಾಂತರಗೊಳ್ಳುವ ವ್ಯಕ್ತಿ ಮತ್ತು ಮತಾಂತರಗೊಳ್ಳುವವನು ಇಬ್ಬರಿಗೂ ಈ ಸ್ವಾತಂತ್ರ್ಯವಿದೆ” ಎಂದು ನ್ಯಾಯಾಧೀಶರು ಹೇಳಿದ್ದರು.