ಹಾಸನ: ಕೌಟುಂಬಿಕ ಕಲಹ (Family Feud) ದ ಹಿನ್ನೆಲೆಯಲ್ಲಿ ಬೇಸತ್ತ ಮಗ ಹಾಗೂ ತಾಯಿ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ (Channarayapatna) ತಾಲೂಕಿನ ಕಬ್ಬಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಯಂತಿ (60), ಭರತ್ (35) ಆತ್ಮಹತ್ಯೆಗೆ ಶರಣಾದ ತಾಯಿ ಹಾಗೂ ಮಗ. ಭರತ್, ಅರಸೀಕೆರೆ (Arasikere) ತಾಲೂಕು ಬಾಗೂರನಹಳ್ಳಿ ಗ್ರಾಮದ ಯುವತಿಯೊಂದಿಗೆ ಕಳೆದ 8 ತಿಂಗಳ ಹಿಂದೆ ವಿವಾಹವಾಗಿದ್ದರು.
ಆದರೆ, ಸೊಸೆ ಹಾಗೂ ಅತ್ತೆಯ ಮಧ್ಯೆ ಹೊಂದಾಣಿಕೆ ಇರಲಿಲ್ಲ. ಇಬ್ಬರು ಪರಸ್ಪರ ಜಗಳ ಮಾಡುತ್ತಿದ್ದರು. ಹೀಗಾಗಿ ಭರತ್ ಪತ್ನಿ ಮನೆಬಿಟ್ಟು ತವರು ಮನೆಗೆ ಹೋಗಿದ್ದರು. ಎಷ್ಟೇ ರಾಜಿ ಪಂಚಾಯ್ತಿ ನಡೆಸಿದರೂ ಭರತ್ ಪತ್ನಿ ಮಾತ್ರ ತವರು ಮನೆ ಬಿಟ್ಟು ಬಂದಿರಲಿಲ್ಲ. ಹೀಗಾಗಿ ಮನನೊಂದ ಭರತ್ ಹಾಗೂ ತಾಯಿ ಜಯಂತಿ ಕೆರೆಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.