ಬೆಂಗಳೂರು- ಚೆನ್ನೈ ಹೈವೆಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರೂ ತಿಳಿಯಲೇಬೇಕಾದ ವಿಚಾರವಿದು. ಈ ಹೆದ್ದಾರಿಯಲ್ಲಿ ಸಂಚರಿಸುವ ಪ್ರತಿಯೊಬ್ಬರ ಪ್ರಾಣಕ್ಕೂ ಸಂಚಕಾರವಿದೆ ಎನ್ನುವುದೀಗ ಬಯಲಾಗಿದೆ.
ಹೌದು, ಈ ಮಾರ್ಗದಲ್ಲಿ ಡೆಡ್ಲಿ ಲೂಟಿಕೋರ ಗ್ಯಾಂಗ್ ಒಂದು ಕಣ್ಬಿಟ್ಟಿರುವುದು ಬೆಳಕಿಗೆ ಬಂದಿದೆ. ಹೆದ್ದಾರಿ ನಡುವೆ ಕಲ್ಲಿಟ್ಟು, ವೇಗವಾಗಿ ಬರುವ ಕಾರುಗಳನ್ನು ಅಪಘಾತ ಮಾಡಿಸುವ ಈ ಗ್ಯಾಂಗ್, ನಂತ್ರ ಡೆಡ್ಲಿ ಅಟ್ಯಾಕ್ ಮಾಡಿ ಅವರನ್ನ ದೋಚುತ್ತಿದೆ. ಮಾರ್ಗ ಮಧ್ಯೆ ಕಲ್ಲಿಟ್ಟು, ಡಿವೈಡರ್ ಗಳ ಮೇಲೆ ಕಾದು ಕುಳಿತು ಹೊಂಚು ಹಾಕುವ ರಕ್ಕಸರು, ವಾಹನ ಅಪಘಾತವಾಗುತ್ತಿದ್ದಂತೆ ಬರ್ಬರವಾಗಿ ಹಲ್ಲೆ ಮಾಡಿ ಹಣ, ಬಂಗಾರ ಲೂಟಿ ಮಾಡುತ್ತಿದ್ದಾರೆ.
ಕಳೆದ 25ನೇ ತಾರೀಕಿನಂದು ಈ ಮಾರ್ಗದಲ್ಲಿ ಮೂರಕ್ಕೂ ಹೆಚ್ಚು ಸಾವು ಸಂಭವಿಸಿದೆ. ಈ ಸಾವುಗಳ ಹಿಂದೆ ಇದೇ ಗ್ಯಾಂಗ್ ನೆರಳಿದೆ ಅಂತಾ ಹಿರಿಯ ವಕೀಲ ಹುಸೇನ್ ಓವೈಸಿ ಡಿಜಿ ಐಜಿಪಿ, ಹೈವೇ ಅಥಾರಿಟಿ, ಹೈವೇ ಚೀಫ್ ಇಂಜಿನಿಯರ್ ಗೆ ದೂರು ನೀಡಿದ್ದಾರೆ.
ಹೊಸಕೋಟೆಯಿಂದ ಚಿತ್ತೂರು, ಕೆಜಿಎಫ್ ನಿಂದ ಹೊಸಕೋಟೆ ಮಾರ್ಗದಲ್ಲಿ ಈ ತಂಡ ತಮ್ಮ ಕುಕೃತ್ಯಗಳನ್ನ ಎಸಗುತ್ತಿರುವ ಗುಮಾನಿಯಿದೆ. ಇನ್ನು ಈ ಮಾರ್ಗದಲ್ಲಿ ಸೂಕ್ತ ರೀತಿಯ ಹೈವೇ ಪೆಟ್ರೋಲಿಂಗ್ ಮತ್ತು ಸಿಸಿ ಕ್ಯಾಮರಾಗಳ ಕಣ್ಗಾವಲಿಲ್ಲ. ಇನ್ನು ಹುಸೇನ್ ಓವೈಸಿಯವರು ನೀಡಿರುವ ದೂರಿನನ್ವಯ ಪೊಲೀಸರು ತನಿಖೆ ಆರಂಭಿಸಿದ್ದು, ಕಾರಿನ ಡ್ಯಾಶ್ ಕ್ಯಾಮರಾಗಳಲ್ಲಿ ಲೂಟಿಕೋರರ ಸುಳಿವು ದಾಖಲಾಗಿರುವುದನ್ನು ಪತ್ತೆ ಮಾಡಿದ್ದಾರೆ.