ನವದೆಹಲಿ: ಭಾರತದ ರಾಷ್ಟ್ರೀಯ ಭದ್ರತೆಯು ಒಂದು ನಾಗರಿಕತೆಯ ಕರ್ತವ್ಯವಾಗಿದ್ದು, ಭಾರತಕ್ಕೆ ಶಕ್ತಿಶಾಲಿಯಾಗಿರದೇ ಬೇರೆ ಯಾವುದೇ ಆಯ್ಕೆ ಇಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್(Mohan Bhagwat) ಅವರು ಹೇಳಿದ್ದಾರೆ. ಸಂಘದ ಶತಮಾನೋತ್ಸವದ ಮುನ್ನಾದಿನವೇ ಅವರು ಈ ಹೇಳಿಕೆ ನೀಡಿದ್ದು, ಇತ್ತೀಚಿನ ಆಪರೇಷನ್ ಸಿಂದೂರ ಕಾರ್ಯಾಚರಣೆಯ(Operation Sindoor) ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ.
ಆರೆಸ್ಸೆಸ್ ಮುಖವಾಗಿ ಆರ್ಗನೈಸರ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮೋಹನ್ ಭಾಗವತ್ ಅವರು, ರಾಷ್ಟ್ರೀಯ ಭದ್ರತೆಯು ಕೇವಲ ಸರ್ಕಾರಗಳ ಜವಾಬ್ದಾರಿಯಲ್ಲ, ಅದು ಸಮಾಜದ ಒಗ್ಗಟ್ಟಿನಿಂದ ಆರಂಭವಾಗುತ್ತದೆ. ನಾವು ವಿಶ್ವದ ವ್ಯಾಪಾರದಲ್ಲಿ ಆಧಿಪತ್ಯ ಸಾಧಿಸಲು ಇದನ್ನು ಮಾಡುತ್ತಿಲ್ಲ, ಆದರೆ ಎಲ್ಲರೂ ಶಾಂತಿಯುತ, ಆರೋಗ್ಯಕರ ಮತ್ತು ಸಬಲ ಜೀವನವನ್ನು ನಡೆಸುವುದನ್ನು ಖಾತರಿಪಡಿಸಲು ಮಾಡುತ್ತಿದ್ದೇವೆ. ನಮ್ಮ ಗಡಿಗಳಲ್ಲಿ ದುಷ್ಟ ಶಕ್ತಿಗಳ ದುಷ್ಟತನವನ್ನು ನಾವು ಕಾಣುತ್ತಿದ್ದೇವೆ, ಆದ್ದರಿಂದ ಶಕ್ತಿಶಾಲಿಯಾಗಿರುವುದೇ ನಮಗೆ ಇರುವ ಏಕೈಕ ಆಯ್ಕೆ,” ಎಂದು ಹೇಳಿದರು.
ಸಾಮಾಜಿಕ ಒಗ್ಗಟ್ಟಿಗೆ ಕರೆ
ರಾಷ್ಟ್ರೀಯ ಭದ್ರತೆಯನ್ನು ಸಾಮಾಜಿಕ ಒಗ್ಗಟ್ಟಿನೊಂದಿಗೆ ಸಂಯೋಜಿಸಿ ಮಾತನಾಡಿರುವ ಭಾಗವತ್, ಜಾತಿ ಸಾಮರಸ್ಯ, ಕೌಟುಂಬಿಕ ಮೌಲ್ಯಗಳು ಮತ್ತು ಪರಿಸರ ಜವಾಬ್ದಾರಿಯನ್ನು ಒಳಗೊಂಡಂತೆ ‘ಸ್ವ’ (ನಾಗರಿಕತೆಯ ಗುರುತು) ಎಂಬ ಪರಿಕಲ್ಪನೆಯನ್ನು ಒತ್ತಿ ಹೇಳಿದರು. “ಒಡಕು ಇರುವ ಸಮಾಜವು ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳಬಹುದು?” ಎಂದು ಪ್ರಶ್ನಿಸಿದ ಅವರು, ಎಲ್ಲರೂ ಒಗ್ಗಟ್ಟಾಗಿದ್ದರಷ್ಟೇ ಭವಿಷ್ಯ ಭದ್ರವಾಗಿರುತ್ತದೆ. ದೀರ್ಘಕಾಲೀನ ರಾಷ್ಟ್ರೀಯ ಭದ್ರತೆಗೆ ಈ ಅಂಶಗಳು ಅತ್ಯಗತ್ಯ ಎಂದರು.
“ನಮಗೆ ಯಾವುದೇ ದೇಶದ ಮೇಲೆ ದ್ವೇಷವಿಲ್ಲ, ಆದರೆ ಒಂದು ವೇಳೆ ದಾಳಿಕೋರರು, ಭಯೋತ್ಪಾದಕರು ನಮ್ಮ ಗಡಿಯೊಳಗೆ ಬಂದು ಗಲಾಟೆ ಮಾಡಿದರೆ, ನಾವು ಅದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ,” ಎಂದು ಆಪರೇಷನ್ ಸಿಂದೂರದ ಬಗ್ಗೆ ಪ್ರಸ್ತಾಪಿಸಿ ಭಾಗವತ್ ಹೇಳಿದರು. ಶಕ್ತಿಯ ಮೂಲಕ ಭಯೋತ್ಪಾದನೆಯನ್ನು ತಡೆಯುವ ಅಗತ್ಯವನ್ನು ಒತ್ತಿ ಹೇಳಿದ ಅವರು, ಭಾರತವು ಜಾಗತಿಕವಾಗಿ ಅಜೇಯವಾಗಿರಬೇಕೆಂದು ಕರೆ ನೀಡಿದರು. ಗಡಿಯಾಚೆಗಿನ ದುಷ್ಟ ಶಕ್ತಿಗಳ ಬಗ್ಗೆಯೂ ಅವರು ಎಚ್ಚರಿಕೆ ನೀಡಿದ್ದು, ಒಗ್ಗಟ್ಟಿನ ಸಮಾಜದಿಂದ ಮಾತ್ರವೇ ಈ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದರು.