ನರೇಂದ್ರ ಮೋದಿ ಸಾರಥ್ಯದ ಎನ್ ಡಿಎ ಸರ್ಕಾರದ ಮೂರನೇ ಅವಧಿ ಆಡಳಿತಕ್ಕೆ ಇನ್ನೇನು ವರ್ಷ ತುಂಬುವ ಕಾಲ ಸಮೀಪಿಸುತ್ತಿದೆ. ಇದೇ ಹೊತ್ತಲೇ ಶುಭ ಸುದ್ದಿಯೊಂದು ಹೊರ ಬಿದ್ದಿದೆ. ಮೋದಿ ಸಂಪುಟ ಸೇರ ಬಯಸುವ ಆಕಾಂಕ್ಷಿಗಳ ಕನಸು ಮತ್ತೆ ಚಿಗುರೊಡೆದಿದೆ.
ಹೌದು! ಸರ್ಕಾರಕ್ಕೆ ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಸಂಪುಟ ವಿಸ್ತರಣೆಗೆ ಮೋದಿ ಮನಸ್ಸು ಮಾಡಿದ್ದಾರೆ. ಈ ತಿಂಗಳಾಂತ್ಯ ಇಲ್ಲವೇ ಮೇ ನಲ್ಲಿ ಸಂಪುಟಕ್ಕೆ ಕೆಲ ಹೊಸ ಮುಖಗಳು ಸೇರ್ಪಡೆಯಾಗುವುದ ನಿಶ್ಚಿತವಾಗಿದೆ.
ಶಿಂಧೆಸೇನೆ, ಅಜಿತ್ ಎನ್ ಸಿಪಿಗೆ ಸಿಂಹಪಾಲು ನಿರೀಕ್ಷೆ
ಮಹಾರಾಷ್ಟ್ರದಲ್ಲಿ ಅಭೂತಪೂರ್ವ ಜಯ ಸಾಧಿಸಿದ ಮಹಾಯತಿ ಪಾಲುದಾರರಿಗೆ ಈ ಬಾರಿ ಸಂಪುಟದಲ್ಲಿ ಸಿಂಹಪಾಲು ನಿರೀಕ್ಷಿಸಲಾಗಿದೆ. ಅದರಲ್ಲೂ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದ ಏಕನಾಥ ಶಿಂಧೆ ಶಿವಸೇನೆ ಬಣಕ್ಕೆ ಮೋದಿ ಸಂಪುಟದಲ್ಲಿ ದೊಡ್ಡ ಅವಕಾಶ ಸಾಧ್ಯತೆಗಳಿವೆ. ಉಳಿದಂತೆ ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಮುಖಂಡರೂ ಕ್ಯಾಬಿನೇಟ್ ಗೆ ಎಂಟ್ರಿ ಕೊಡುವ ಲಕ್ಷಣಗಳು ಕಾಣಿಸುತ್ತಿವೆ. ಇದರೊಟ್ಟಿಗೆ ವರ್ಷಾಂತ್ಯದ ಹೊತ್ತಿಗೆ ಚುನಾವಣೆಗೆ ಸಜ್ಜಾಗಿರುವ ಬಿಹಾರದ ನಾಯಕರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳುವ ಲೆಕ್ಕಾಚಾರವನ್ನು ಮೋದಿ ಮಾಡಿದ್ದಾರೆ. ಅದರಲ್ಲೂ ರಾಜ್ಯಸಭಾ ಸದಸ್ಯ ಉಪೇಂದ್ರ ಕುಶ್ವಾಹ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.
ನೂತನ ಪಕ್ಷಾಧ್ಯಕ್ಷರ ಆಯ್ಕೆಗೆ ಕ್ಷಣಗಣನೆ
ಬಹು ದಿನಗಳಿಂದ ನೆನಗುದಿಗೆ ಬಿದ್ದಿರುವ ಪಕ್ಷದ ಅಧ್ಯಕ್ಷರ ಆಯ್ಕೆಗೂ ಮುಹೂರ್ತ ನಿಗದಿಯಾಗಿದೆ. ನಡ್ಡಾ ಸ್ಥಾನಕ್ಕೆ ಹೊಸಬರ ಆಯ್ಕೆ ಮಾಡಲು ಈಗಾಗಲೇ ಆರ್ ಎಸ್ ಎಸ್ ಜೊತೆ ಮೋದಿ ಮತ್ತು ಅಮಿತ್ ಶಾ ಚರ್ಚಿಸಿ ಆಗಿದೆ. ಹೀಗಾಗಿ ಈ ತಿಂಗಳಾಂತ್ಯ ಇಲ್ಲಾ ಮೇ ಮೊದಲ ವಾರದಲ್ಲೇ ಕಮಲ ಪಡೆಗೆ ಹೊಸ ಸಾರಥಿ ಆಯ್ಕೆ ನಿಶ್ಚಿತವಾಗಿದೆ. ಮನೋಹರ್ ಲಾಲ್ ಕಟ್ಟರ್, ಭುಪೇಂದರ್ ಯಾದವ್, ಧರ್ಮೇಂದ್ರ ಪ್ರಧಾನ್ ಹೆಸರುಗಳು ಸದ್ಯಕ್ಕೆ ಮುಂಚೂಣಿಯಲ್ಲಿವೆ. ಇದರೊಟ್ಟಿಗೆ ಮೊದಲ ಬಾರಿ ಮಹಿಳೆಯೊಬ್ಬರನ್ನು ಪಕ್ಷದ ಅಧ್ಯಕ್ಷ ಗಾದಿ ಮೇಲೆ ಕೂರಿಸುವ ಲೆಕ್ಕಾಚಾರಗಳೂ ಸಂಘ ಪರಿವಾರದ ಅಂಗಳದಲ್ಲಿ ನಡೆದಿವೆ. ಇದರೊಟ್ಟಿಗೆ ಕೆಲ ರಾಜ್ಯಗಳ ಪಕ್ಷಾಧ್ಯಕ್ಷರ ಬದಲಾವಣೆಯೂ ಖಚಿತವಾಗಿದೆ.
ಆದರೆ ಕರ್ನಾಟಕದಲ್ಲಿ ಅಧ್ಯಕ್ಷರ ಬದಲಾವಣೆಯೋ ಇಲ್ಲಾ ಮುಂದುವರಿಕೆಯೋ ಅನ್ನೋದಿನ್ನೂ ಅಸ್ಪಷ್ಟವಾಗಿದೆ. ಆದರೆ, ಸದ್ಯ ವಿದೇಶ ಪ್ರವಾಸಕ್ಕೆ ಸಜ್ಜಾಗಿರುವ ಮೋದಿ ಸೌದಿಯಿಂದ ಮರಳಿದ ನಂತರವೇ ಇವೆಲ್ಲಾ ನಡೆಯಲಿವೆ. ಈ ತಿಂಗಳ 21ರಿಂದ 23ರವರೆಗೂ ಮೋದಿ ಸೌದಿ ಪ್ರವಾಸಕ್ಕೆ ತೆರಳುತ್ತಿದ್ದು, ಅಲ್ಲಿಂದ ಮರಳಿದ ನಂತರವೇ ಈ ಎಲ್ಲವೂ ಅಖೈರಾಗಲಿವೆ.